ಬೈಕಿನಲ್ಲಿ ಅಡಗಿದ ಹಾವು – ಇಡೀ ಬೈಕನ್ನೇ ಬಿಚ್ಚಿದ ಯುವಕರು

ಕೊಪ್ಪಳ: ಬೈಕ್‍ನಲ್ಲಿ ಅಡಗಿದ ಹಾವನ್ನು ಹೊರ ತೆಗೆಯಲು ಇಡೀ ಬೈಕ್‍ನ ಬಿಡಿ ಭಾಗಗಳನ್ನೇ ಬಿಚ್ಚಿರುವ ಘಟನೆ ಕೊಪ್ಪಳದ ಗಂಗಾವತಿಯ ನೀಲಕಂಠೇಶ್ವರ ದೇವಸ್ಥಾನದ ಬಳಿ ನಡೆದಿದೆ.

ಇಂದು ಬೆಳಗ್ಗೆ ನಗರದ ಅಭಿಷೇಕ್ ಅವರಿಗೆ ಸೇರಿದ ಬೈಕ್‍ನಲ್ಲಿ ಹಾವೊಂದು ಸೇರಿಕೊಂಡಿದೆ. ಹಿಂಬದಿಯಲ್ಲಿ ಬರುತ್ತಿದ್ದ ಪ್ರಯಾಣಿಕರು ಇದನ್ನು ಗಮನಿಸಿ ನಂತರ ಬೈಕ್ ಸವಾರನಿಗೆ ತಿಳಿಸಿದ್ದಾರೆ. ಬೈಕ್‍ನಲ್ಲಿ ಹಾವು ಇರುವುದನ್ನು ತಿಳಿದು ಕಕ್ಕಾಬಿಕ್ಕಿಯಾದ ಅಭಿಷೇಕ್ ತಕ್ಷಣ ಬೈಕ್ ನಿಲ್ಲಿಸಿದ್ದಾರೆ.

ಅಲ್ಲಿನ ಸ್ಥಳೀಯರ ಸಹಾಯ ಪಡೆದು ಹಾವನ್ನು ಹುಡುಕಲು ಪ್ರಯತ್ನಿಸಿದ್ದಾರೆ. ಆದರೆ ಅರ್ಧಗಂಟೆಗೂ ಹೆಚ್ಚು ಕಾಲ ಬೈಕ್‍ನಲ್ಲಿ ಅವಿತ ಹಾವು ಇವರ ಕಣ್ಣಿಗೆ ಕಂಡಿಲ್ಲ. ಇದರಿಂದ ಬೈಕ್ ಸವಾರ ಮತ್ತು ಸ್ಥಳೀಯ ಯುವಕರು ಸೇರಿ ಬೈಕ್‍ನ ಎಲ್ಲ ಬಿಡಿಭಾಗಗಳನ್ನು ಬಿಚ್ಚಿದ್ದಾರೆ. ನಂತರ ಬೈಕ್‍ನಿಂದ ಹೊರಬಂದ ಹಾವು ಚಂಗನೆ ಜಿಗಿದು ಹತ್ತಿರದ ಪೊದೆಯ ಒಳಗಡೆ ಹೋಗಿದೆ. ಬೈಕಿನಿಂದ ಹಾವು ಹೊರ ಬಂದಿದ್ದನ್ನು ಕಂಡ ಬೈಕ್ ಸವಾರ ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ.

Comments

Leave a Reply

Your email address will not be published. Required fields are marked *