ಹನುಮಾನ್ ಚಾಲಿಸಾ ಪಠಿಸಿದ ಮುಸ್ಲಿಂ ಮಹಿಳೆಗೆ ಜೀವ ಬೆದರಿಕೆ

ಕೋಲ್ಕತ್ತಾ: ತ್ರಿವಳಿ ತಲಾಖ್ ವಿರುದ್ಧ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿದ್ದ ಬಿಜೆಪಿ ಸದಸ್ಯೆ ಇಶ್ರತ್ ಜಹಾನ್ ಅವರು ಹನುಮಾನ್ ಚಾಲಿಸಾ ಪಠಣದಲ್ಲಿ ಭಾಗವಹಿಸಿದಕ್ಕೆ ನನಗೆ ಜೀವ ಬೆದರಿಕೆ ಬಂದಿದೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ವಿಚಾರವಾಗಿ ಹೌರಾದ ಗೋಲಬಾರಿ ಪೊಲೀಸ್ ಠಾಣೆಯಲ್ಲಿ ಇಶ್ರತ್ ಜಹಾನ್ ದೂರು ನೀಡಿದ್ದಾರೆ. ಈ ದೂರಿನಲ್ಲಿ ತನ್ನ ಸೋದರ ಮಾವ ಮತ್ತು ನನ್ನ ಮನೆಯ ಮಾಲೀಕ ಹಿಂದೂ ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಜೀವ ಬೆದರಿಕೆ ಮತ್ತು ಮಾತಿನ ನಿಂದನೆ ಮಾಡುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

ಇಶ್ರತ್ ಜಹಾನ್ ಅವರು ತನ್ನ ದೂರಿನಲ್ಲಿ, ನಾನು ಹೌರಾದ ಎಸಿ ಮಾರುಕಟ್ಟೆಯ ಮುಂದೆ ಬಿಜೆಪಿ ಬೆಂಬಲಿಗರು ಆಯೋಜಿಸಿದ್ದ ಹನುಮಾನ್ ಚಾಲಿಸಾ ಪಾಥ್ ನಲ್ಲಿ ಭಾಗವಹಿಸಿದ್ದೆ. ಇದಾದ ನಂತರ ಬುಧವಾರ ನನ್ನ ಮಗನನ್ನು ಶಾಲೆಯಿಂದ ಕರೆದುಕೊಂಡು ಮನೆಗೆ ಬರುತ್ತಿರುವಾಗ ಸುಮಾರು 100 ಜನರು ನನ್ನನ್ನು ಸುತ್ತುವರಿದು ಹಿಜಾಬ್‍ನಲ್ಲಿ ಏಕೆ ಹಿಂದೂ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದೆ ಎಂದು ಪ್ರಶ್ನಿಸಿ ನನ್ನನ್ನು ನಿಂದಿಸಿದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ನನ್ನ ಮನೆಯ ಹೊರಗೆ ಒಂದು ದೊಡ್ಡ ಮುಸ್ಲಿಂ ಜನಸಮೂಹ ಬಂದು ನೀನು ಯಾಕೆ ಬುರ್ಖಾ ಧರಿಸಿ ಹಿಂದೂಗಳ ಹನುಮಾನ್ ಚಾಲಿಸಾ ಕಾರ್ಯಕ್ರಮಕ್ಕೆ ಹೋಗಿದ್ದೆ ಎಂದು ಕೇಳಿದರು. ಅಷ್ಟೇ ಅಲ್ಲದೇ ನಾನು ಮನೆಯಿಂದ ಹೊರಹೋಗುವಂತೆ ಹೇಳಿದರು. ಇಲ್ಲದಿದ್ದರೆ ಅವರು ನನ್ನನ್ನು ಬಲವಂತವಾಗಿ ಮನೆಯಿಂದ ಹೊರಗೆ ತಳ್ಳುತ್ತೇವೆ ಎಂದು ಬೆದರಿಕೆ ಹಾಕಿದರು. ನನಗೆ ಜೀವ ಬೆದರಿಕೆ ಇದೆ. ನನಗೆ ರಕ್ಷಣೆ ಬೇಕು. ನಾನು ನನ್ನ ಮಗನೊಂದಿಗೆ ಏಕಾಂಗಿಯಾಗಿ ವಾಸಿಸುತ್ತಿದ್ದೇನೆ. ನನಗೆ ಯಾವಾಗ ಬೇಕಾದರೂ ಎನ್ ಬೇಕಾದರೂ ಆಗಬಹುದು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ವಿಚಾರದ ಬಗ್ಗೆ ಮಾತನಾಡಿರುವ ಗೋಲಬಾರಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು, ನಾವು ದೂರಿನ ತೆಗೆದುಕೊಂಡು ತನಿಖೆ ಆರಂಭಿಸಿದ್ದೇವೆ ಮತ್ತು ಇದರ ಬಗ್ಗೆ ತನಿಖೆ ಮಾಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

2014ರಲ್ಲಿ ಸತತವಾಗಿ ಮೂರು ಬಾರಿ ತಲಾಖ್ ಎಂಬ ಪದವನ್ನು ಹೇಳುವ ಮೂಲಕ ಇಶ್ರತ್ ಜಹಾನ್ ಪತಿ ದುಬೈನಿಂದ ದೂರವಾಣಿಯಲ್ಲಿ ವಿಚ್ಛೇದನ ನೀಡಿದ ನಂತರ ಅವರು ತ್ರಿವಳಿ ತಲಾಖ್ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿದ್ದರು.

Comments

Leave a Reply

Your email address will not be published. Required fields are marked *