ಸೈಕಲ್ ಪಂಕ್ಚರ್ ಮಾಡಿದ ಕಂದಮ್ಮನನ್ನ ಕೊಂದೇ ಬಿಟ್ಲು

ಕೋಲಾರ: ಹುಡುಗಾಟದ ವೇಳೆ ಸೈಕಲ್ ಪಂಕ್ಚರ್ ಮಾಡಿದ ಕಂದಮ್ಮನನ್ನು ಸೈಕಲ್ ಮಾಲಕಿ ಕೊಲೆಗೈದ ಘಟನೆ ಮುಳಬಾಗಿಲು ತಾಲೂಕಿನ ಹೆಬ್ಬಣಿ ಬೈಪಲ್ಲಿ ಗ್ರಾಮದಲ್ಲಿ ನಡೆದಿದೆ.

ಹೆಬ್ಬಣಿ ಬೈಪಲ್ಲಿ ಗ್ರಾಮದ ಜ್ಯೋತಿ ಎಂಬವರ ಮಗ ಗೋವರ್ಧನ್ (5) ಮೃತ ದುರ್ದೈವಿ. ಅದೇ ಗ್ರಾಮದ ರೆಡ್ಡಮ್ಮ (45) ಕೊಲೆ ಮಾಡಿದ ಸೈಕಲ್ ಮಾಲಕಿ. ಘಟನೆಯಲ್ಲಿ ಬಾಲಕ ತಾಯಿ ಗಂಭೀರವಾಗಿ ಗಾಯಗೊಂಡಿದ್ದು, ಮುಳಬಾಗಿಲು ಆಸ್ಪತ್ರೆಗೆ ದಾಖಲಾಗಿದ್ದಾಳೆ.

ಆಗಿದ್ದೇನು?:
ಜ್ಯೋತಿ ಹಾಗೂ ರೆಡ್ಡಮ್ಮ ನೆರೆಹೊರೆಯವರಾಗಿದ್ದು, ಈ ಹಿಂದೆ ಸಣ್ಣ ವಿಚಾರಕ್ಕೆ ಅನೇಕ ಬಾರಿ ಜಗಳವಾಗಿತ್ತು. ಬಾಲಕ ಗೋವರ್ಧನ್ ಇಂದು ಹುಡುಗಾಟಕ್ಕೆ ಮೊಳೆ ಹಿಡಿದು ರೆಡ್ಡಮ್ಮನ ಸೈಕಲ್ ಪಂಕ್ಚರ್ ಮಾಡಿದ್ದಾನೆ. ಇದನ್ನು ನೋಡಿದ ರೆಡ್ಡಮ್ಮ ಬಾಲಕನಿಗೆ ಥಳಿಸಿದ್ದಾಳೆ. ಈ ವೇಳೆ ಅಲ್ಲಿಗೆ ಬಂದ ಜ್ಯೋತಿ ಯಾಕೆ ಮಗನನ್ನು ಹೊಡೆಯುತ್ತಿರವೇ ಎಂದು ಪ್ರಶ್ನಿಸಿದ್ದಾಳೆ. ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡಿದ್ದಾರೆ.

ಜ್ಯೋತಿ ಮೇಲೆ ಹಲ್ಲೆಗೆ ಮುಂದಾದ ರೆಡ್ಡಮ್ಮ ಕಲ್ಲು ಎತ್ತಿಕೊಂಡು ಬೀಸಿದ್ದಾಳೆ. ಆದರೆ ಕಲ್ಲು ಗೋವರ್ಧನ್ ತಲೆಗೆ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದ. ಇದನ್ನು ಗಮನಿಸದೇ ಜ್ಯೋತಿ ಹಾಗೂ ರೆಡ್ಡಮ್ಮ ಜಗಳವಾಡುತ್ತಿದ್ದರು. ಬಾಲಕ ಬಿದ್ದು ಒದ್ದಾಡುತ್ತಿರುವುದನ್ನು ನೋಡಿದ ರೆಡ್ಡಮ್ಮನ ಸಂಬಂಧಿಕರು ಬೈಕ್ ಮೇಲೆ ಆತನನ್ನು ಕೂರಿಸಿಕೊಂಡು ಮುಳಬಾಗಿಲು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ಚಿಕಿತ್ಸೆ ನೀಡಲು ಮುಂದಾದ ವೈದ್ಯರು, ಮಾರ್ಗ ಮಧ್ಯದಲ್ಲಿಯೇ ಬಾಲಕ ಮೃತಪಟ್ಟಿದ್ದಾನೆ ಎಂದು ಖಚಿತ ಪಡಿಸಿದ್ದಾರೆ. ಘಟನೆಯಲ್ಲಿ ಬಾಲಕನ ತಾಯಿ ಜ್ಯೋತಿ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಗ್ರಾಮಕ್ಕೆ ಮುಳುಬಾಗಿಲು ಡಿವೈಎಸ್‍ಪಿ ಉಮೇಶ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂಗಲಿ ಪೊಲೀಸ್ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Comments

Leave a Reply

Your email address will not be published. Required fields are marked *