ಬೆಳೆ ಸಾಲಮನ್ನಾ ಕೇವಲ ರೈತರ ಮೂಗಿಗೆ ತುಪ್ಪಸವರುವಂತಿದೆ: ಕೋಡಿಹಳ್ಳಿ ಚಂದ್ರಶೇಖರ್

ಬೆಂಗಳೂರು: ಸಿಎಂ ಕುಮಾರಸ್ವಾಮಿಯವರು ಬೆಳೆ ಸಾಲಮನ್ನಾ ಮಾಡಿ ಕೇವಲ ರೈತರ ಮೂಗಿಗೆ ತುಪ್ಪಸವರುವ ಕೆಲಸ ಮಾಡುತ್ತಿದ್ದಾರೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದ್ದಾರೆ.

ಸಂಪೂರ್ಣ ಸಾಲಮನ್ನಾ ಕುರಿತು ಕರೆದಿದ್ದ ತುರ್ತು ಸಭೆಯಲ್ಲಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ಸಿಎಂ ಕುಮಾರಸ್ವಾಮಿಯವರು ಬೆಳೆ ಸಾಲಮನ್ನಾ ಮಾಡಿ ಕೇವಲ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದು, ಸಾಲಮನ್ನಾ ಹೇಳಿಕೆಯು ಲೋಕಸಭೆ ಚುನಾವಣೆಯ ಗಿಮಿಕ್ ಎನ್ನುವುದು ನಮಗೆ ಈಗ ಅರ್ಥವಾಗುತ್ತಿದೆ ಎಂದು ತಿಳಿಸಿದ್ದಾರೆ.

ಸಿಎಂ ಸಾಲ ಮನ್ನಾದ ವಿಚಾರ ಪ್ರಸ್ತಾಪವಾದಗೆಲ್ಲ ಸಿಡಿಮಿಡಿಗೊಳ್ಳುತ್ತಾರೆ. ಕೊಪ್ಪಳದಲ್ಲಿ ರೈತ ಮುಖಂಡರಿಗೆ ತರಾಟೆಗೆ ತೆಗೆದುಕೊಂಡು, ಇವರು ವೋಟ್ ಹಾಕಿಲ್ಲ ಸಾಲ ಮನ್ನಾ ಮಾಡಿ ಅಂತಾ ಕೇಳುತ್ತಾರೆ ಎಂದು ಬಹಿರಂಗ ಹೇಳಿಕೆಯನ್ನು ನೀಡುತ್ತಿದ್ದಾರೆ. ಕುಮಾರಸ್ವಾಮಿಯವರ ಬಗ್ಗೆ ಮಾತಾನಾಡೋಕೆ ನನಗೆ ಯಾವ ಭಯವೂ ಇಲ್ಲ, ಅವರು ನನ್ನ ಚಿಕ್ಕಪ್ಪನ ಮಗನೂ ಅಲ್ಲ, ದೊಡ್ಡಪ್ಪನೂ ಮಗನೂ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಮೊದಲು ಸಾಲ ಮನ್ನಾದ ವಿಚಾರಕ್ಕೆ ಸಿಎಂ ಕುಮಾರಸ್ವಾಮಿಯವರನ್ನು ಭೇಟಿಯಾದಾಗ ಸಾಕಷ್ಟು ಸತಾಯಿಸಿ ಭೇಟಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದರು. ಈ ವೇಳೆ ನನ್ನ ಜೊತೆ ಸಿಟ್ಟಿನಲ್ಲಿ ಮಾತಾನಾಡಿದ್ದರು. ರೈತರಿಗೆ ವೋಟು ಹಾಕೋವಾಗ ಈ ಜ್ಞಾನ ಇರಲ್ವಾ? ಸಾಲ ಮನ್ನಾಕ್ಕೆ ಕೇಳೋಕೆ ಬರ್ತೀರಾ ಅಂತಾ ನನ್ನನ್ನೆ ಪ್ರಶ್ನಿಸಿದ್ದರು. ನಾನು ಅವರ ಮನವೊಲಿಕೆ ಮಾಡಿದ ನಂತರ ಸಿಎಂ ನಾನು ನಿಮ್ಮ ಬಗ್ಗೆ ಮಾತಾಡಿಲ್ಲ ಅಂತ ಹೇಳಿದ್ದರು. ಹಾಗಾದರೆ ಅವರು ಬೇರೆ ರೈತ ಮುಖಂಡರ ಬಗ್ಗೆ ಟಾರ್ಗೆಟ್ ಮಾಡಿ ನನ್ನನ್ನು ನಿಂದಿಸಿ ಮಾತನಾಡಿದ್ದಾರೆ. ಸಿಎಂ ಬಹಳ ದಂದ್ವ ನೀತಿಯಲ್ಲಿ ಇರುವಂತಿದೆ ಎಂದು ರೈತರ ಬಳಿ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.

ಸಿಎಂ ಕುಮಾರಸ್ವಾಮಿಯವರು ಸಾಲಮನ್ನಾ ಘೋಷಣೆ ಬಳಿಕವು, ವಿಮೆ ಕಡಿತ ಸೇರಿದಂತೆ ಸಾಲ ಪಾವತಿಗಾಗಿ ಬ್ಯಾಂಕುಗಳು ಪದೇ ಪದೇ ನೋಟಿಸ್ ಕಳುಹಿಸುತ್ತಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದ್ದು, ಸಭೆಯಲ್ಲಿ ರೈತರು ಸಂಪೂರ್ಣ ಸಾಲಮನ್ನಾ ಮಾಡುವಂತೆ ಆಗ್ರಹಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Comments

Leave a Reply

Your email address will not be published. Required fields are marked *