ಕೊಡಗಿನಲ್ಲಿ ಮತ್ತೆ ಪ್ರವಾಹ ಭೀತಿ – ಮನೆ ಖಾಲಿ ಮಾಡ್ತಿರುವ ಮಂದಿಗೆ ಬಾಡಿಗೆ ಮನೆಗಳೇ ಸಿಗ್ತಿಲ್ಲ

ಮಡಿಕೇರಿ: ಕಳೆದ ವರ್ಷ ಅಬ್ಬರಿಸಿ ಬೊಬ್ಬಿರಿದಿದ್ದ ಮಳೆ ಕೊಡಗು ಜಿಲ್ಲೆಯನ್ನು ಅಕ್ಷರಶಃ ನೀರಿನಲ್ಲಿ ಮುಳುಗಿಸಿತ್ತು. ಆದರೆ ಈಗ ಮತ್ತೆ ಕೊಡಗಿನಲ್ಲಿ ಪ್ರವಾಹದ ಭೀತಿ ಎದುರಾಗಿದೆ.

ಶತಮಾನದಲ್ಲಿ ಕಂಡು ಕೇಳರಿಯದ ಮಳೆಗೆ ಮಂಜಿನ ನಗರಿಯ ಜನತೆ ತತ್ತರಿಸಿ ಹೋಗಿದ್ದರು. ಮಡಿಕೇರಿ ನಗರದ ಸುತ್ತಮುತ್ತಲಿರುವ ಜನರ ನೂರಾರು ಮನೆಗಳು ಧರಶಾಹಿಯಾಗಿತ್ತು. ನೂರಾರು ವರ್ಷಗಳಿಂದ ಎಂಥಂತದ್ದೋ ಮಳೆಯನ್ನು ನೋಡಿದ ಜನ ಕಳೆದ ವರ್ಷದ ಮಳೆಗೆ ಬೆಚ್ಚಿ ಬಿದ್ದಿದ್ದರು.

ಕಳೆದ ವರ್ಷದ ಮಳೆಯಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಅಪಾಯದ ಸ್ಥಳಗಳಲ್ಲಿರುವ ಮನೆಗಳನ್ನು ಖಾಲಿ ಮಾಡುವಂತೆ ಜನಸಾಮಾನ್ಯರಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಮಡಿಕೇರಿ ನಗರದ ಚಾಮುಂಡೇಶ್ವರಿ ನಗರ, ಇಂದಿರಾ ನಗರ, ಮಂಗಳಾದೇವಿನಗರ ಸೇರಿದಂತೆ ಕೆಲ ಪ್ರದೇಶಗಳಲ್ಲಿನ ಜನರು ಒಬ್ಬೊಬ್ಬರಾಗಿಯೇ ವರುಣನ ಭಯದಿಂದ ಮನೆ ಖಾಲಿ ಮಾಡುತ್ತಿದ್ದಾರೆ.

ಜನರು ಏನೋ ಮಳೆಯ ಭಯದಿಂದ ಮನೆಯೇನೋ ಖಾಲಿ ಮಾಡುತ್ತಿದ್ದಾರೆ. ಆದರೆ ಹೀಗೆ ಮನೆ ಖಾಲಿ ಮಾಡಲು ಹೊರಟವರಿಗೆ ಮಡಿಕೇರಿ ನಗರದಲ್ಲಿ ಮನೆಗಳೇ ಸಿಗುತ್ತಿಲ್ಲ. ಇರೋ ಕೆಲವೇ ಕೆಲ ಮನೆಗಳು ಹೋಮ್ ಸ್ಟೇಗಳಾಗಿ ಪರಿವರ್ತನೆ ಆಗಿರುವ ಕಾರಣ ಜನರಿಗೆ ಬಾಡಿಗೆ ಮನೆಗಳು ಸಿಗುವುದೇ ದೊಡ್ಡ ಸವಾಲಾಗಿದೆ.

Comments

Leave a Reply

Your email address will not be published. Required fields are marked *