ಕೊರೊನಾದಿಂದ ಪಾರಾಗಲು ಹರ್ಬಲ್ ತಾಯತ ಮೊರೆ ಹೋದ ಟಿಬೆಟಿಯನ್ನರು

ಮಡಿಕೇರಿ: ವಿಶ್ವದೆಲ್ಲೆಡೆ ಭಾರೀ ಸದ್ದು ಮೂಡಿಸಿರುವ ಕೊರೊನಾ ವೈರಸ್ ಟಿಬೆಟಿಯನ್ ಕ್ಯಾಂಪ್‍ಗಳಲ್ಲಿ ಆಚರಿಸುವ ಹೊಸವರ್ಷಾಚರಣೆ ಮೇಲು ಕರಿನೆರಳು ಬೀರಿದೆ. ಹೀಗಾಗಿ ಇದೇ 24 ರಂದು ಹೊಸವರ್ಷಾಚರಣೆಗೆ ಬರಬೇಕಾಗಿದ್ದ ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರ ಭೇಟಿಯನ್ನೂ ಮುಂದೂಡಲಾಗಿದೆ. ಟಿಬೆಟಿಯನ್ನರು ವೈರಸ್‍ನಿಂದ ರಕ್ಷಿಸಿಕೊಳ್ಳಲು ಹರ್ಬಲ್ ಮಾತ್ರೆ ಮತ್ತು ಔಷಧಿಗಳ ಮೊರೆಹೋಗಿದ್ದು ಅದು ಕ್ಯಾಂಪಿನೆಲ್ಲೆಡೆ ಸದ್ದು ಮಾಡುತ್ತಿದೆ.

ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ಬೈಲುಕುಪ್ಪೆಯಲ್ಲೂ ಟಿಬೆಟಿಯನ್ ಕ್ಯಾಂಪ್ ಇದ್ದು, ಫೆಬ್ರವರಿ 24 ರಿಂದ ಇಲ್ಲಿ ಹೊಸವರ್ಷಾಚರಣೆ ನಡೆಯಲಿದೆ. ಥೈವಾನ್, ಹಾಂಕಾಂಗ್, ಚೀನಾ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿರುವ ತಮ್ಮ ಸಂಬಂಧಿಕರನ್ನು ಆಹ್ವಾನಿಸಿ ಇಲ್ಲಿಯ ಜನರು ವಾರಗಳ ಕಾಲ ಹೊಸವರ್ಷಾಚರಣೆ ಮಾಡುತ್ತಾರೆ. ಆದರೆ ಕೊರೊನಾ ವೈರಸ್‍ನ ಆತಂಕ ಮನೆ ಮಾಡಿದ್ದು, ಇಲ್ಲಿಯ ಜನರು ಧರ್ಮಶಾಲಾದಿಂದ ಬಂದಿರುವ ಹರ್ಬಲ್ ಮಾತ್ರೆ, ಔಷಧಿಗಳ ಮೊರೆ ಹೋಗಿದ್ದಾರೆ.

ಧರ್ಮಗುರು ದಲೈಲಾಮಾ ಅವರಿಂದ ಪೂಜಿಸಲ್ಪಿಟ್ಟಿರುವ ಹಿಮಾಚಲ ಪ್ರದೇಶದ ಧರ್ಮಶಾಲಾದಿಂದ ತಂದಿರುವ ಹರ್ಬಲ್ ಮಾತ್ರೆಯೊಂದನ್ನು ಕ್ಯಾಂಪಿನಲ್ಲಿರುವ 15 ರಿಂದ 20 ಸಾವಿರ ಟಿಬೆಟಿಯನ್ನರಿಗೂ ವಿತರಣೆ ಮಾಡಲಾಗಿದೆ. ಎಲ್ಲರೂ ಈ ಹರ್ಬಲ್ ಮಾತ್ರೆಯನ್ನು ತಾಯತದಂತೆ ಕೊರಳಿಗೆ ಕಟ್ಟಿಕೊಂಡಿದ್ದು ಜನನಿಬಿಡಿ ಪ್ರದೇಶದಲ್ಲಿರುವಾಗ ಅದನ್ನು ದಿನಕ್ಕೆ ಐದರಿಂದ ಆರು ಬಾರಿ ವಾಸನೆ ತೆಗೆದುಕೊಂಡರೆ ಕೊರೊನಾ ಅಷ್ಟೇ ಅಲ್ಲ ಬೇರೆ ಎಲ್ಲಾ ವೈರಸ್‍ಗಳಿಂದಲೂ ರಕ್ಷಣೆ ಪಡೆಯಬಹುದು ಎನ್ನಲಾಗುತ್ತಿದೆ.

ಹೀಗಾಗಿ ಈ ಮಾತ್ರೆಗೆ ಬೈಲುಕುಪ್ಪದಲ್ಲಿ ಭಾರೀ ಬೇಡಿಕೆ ಇದೆ. ಜೊತೆಗೆ ನೆಗೋಗ್ ಧುಯೆಸ್ತಿ ಹೆಸರಿನ ಲೋಷನ್ ಒಂದನ್ನು ಮೂಗಿನ ಬಳಿ ಹಚ್ಚಿಕೊಂಡರೆ ಕೊರೊನಾ ವೈರಸ್ ದೇಹದ ಮೇಲೆ ದಾಳಿ ಮಾಡದಂತೆ ರಕ್ಷಣೆ ಪಡೆದುಕೊಳ್ಳಬಹುದು ಎನ್ನಲಾಗಿದೆ. ಹೀಗಾಗಿ ಈ ಎರಡು ಔಷಧಿಗಳಿಗೆ ಇಲ್ಲಿ ಬಾರೀ ಬೇಡಿಕೆ ಇದ್ದು, ಟಿಬೆಟಿಯನ್ನರ ಯಾರ ಕೊರಳಿನಲ್ಲಿ ನೋಡಿದರೂ ಹರ್ಬಲ್ ಮಾತ್ರೆಯ ತಾಯತ ಕಾಣಸಿಗುತ್ತದೆ.

Comments

Leave a Reply

Your email address will not be published. Required fields are marked *