ಮೃತದೇಹ ಸಿಗದ್ದಕ್ಕೆ ಗೊಂಬೆ ಅಲಂಕರಿಸಿ, ಮದುವೆ ಮಾಡಿಸಿ ಮಗಳ ಅಂತ್ಯಸಂಸ್ಕಾರ ನೆರವೇರಿಸಿದ ಹೆತ್ತವರು!

ಮಡಿಕೇರಿ: ಮಹಾಮಳೆಗೆ ಕೊಚ್ಚಿ ಹೋಗಿದ್ದ ಮಗಳ ಮೃತದೇಹ ಪತ್ತೆಗಾಗಿ ಪೋಷಕರು ಹುಡುಕಾಡಿದರೂ ಶವ ಮಾತ್ರ ಪತ್ತೆಯಾಗಲೇ ಇಲ್ಲ. ಕೊನೆಗೆ ಮಗಳ ಆತ್ಮಕ್ಕೆ ಶಾಂತಿ ದೊರಕಲು ಗೊಂಬೆಯನ್ನು ಅಲಂಕರಿಸಿ, ಮದುವೆ ಮಾಡಿಸಿ ಅಂತ್ಯಸಂಸ್ಕಾರ ನೆರವೇರಿಸಿದ ಮನಕಲಕುವ ಘಟನೆ ಕೊಡಗಿನ ಮದೆನಾಡಿನಲ್ಲಿ ನಡೆದಿದೆ.

ಮಡಿಕೇರಿ ತಾಲೂಕಿನ ಮದೆನಾಡು ಸರ್ಕಾರಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಜೋಡುಪಾಲ ನಿವಾಸಿ ಮಂಜುಳಾ ಭಾರೀ ಮಳೆಯಿಂದ ಉಂಟಾದ ನೆರೆಗೆ ಕೊಚ್ಚಿ ಹೋಗಿದ್ದಳು. ಕೊಚ್ಚಿ ಹೋದ ಬಳಿಕ ಆಕೆಯ ಮೃತದೇಹಕ್ಕಾಗಿ ಪೋಷಕರು, ಊರವರು ಸಾಕಷ್ಟು ಹುಡುಕಾಟ ನಡೆಸಿದ್ದರು. ಎಷ್ಟು ಹುಡುಕಾಡಿದರೂ ಶವ ಸಿಗದ ಹಿನ್ನೆಲೆಯಲ್ಲಿ ಮಗಳ ಆತ್ಮಕ್ಕೆ ಶಾಂತಿ ಸಿಗಲು ಮಂಜುಳಾ ಪೋಷಕರು ಇದು ಗೊಂಬೆಯನ್ನು ಮದುವೆ ಮಾಡಿಸಿ ಅಂತ್ಯಸಂಸ್ಕಾರ ನಡೆಸಿದರು.

ಹೀಗಿತ್ತು ಕಾರ್ಯಕ್ರಮ:
ಮನೆ ಕೊಚ್ಚಿಹೋದ ಸ್ಥಳದಲ್ಲೇ ಮಂಜುಳಾ ಪ್ರತಿಕೃತಿ ತಯಾರು ಮಾಡಿ ಶೃಂಗಾರ ಮಾಡಲಾಗಿತ್ತು. ಅನೇಕ ಮಹಿಳೆಯರು ಸೇರಿ ಗೊಂಬೆಗೆ ಸೀರೆ ಉಡಿಸಿ, ಮಾರುದ್ದ ಜಡೆಗೆ ಮಲ್ಲಿಗೆ ಹೂವನ್ನ ಮುಡಿಸಿದರು. ಜೀವ ಇಲ್ಲದ ಗೊಂಬೆಗೆ ಮಾನಸಿಕವಾಗಿ ಜೀವ ನೀಡಿ, ಮದುವೆಯೂ ಮಾಡಿ ಅಂತ್ಯಸಂಸ್ಕಾರಕ್ಕೆ ಸಿದ್ಧಗೊಳಿಸಲಾಯಿತು. ಸಕಲ ಪೂಜೆಗಳನ್ನು ನೆರವೇರಿಸಿ ಮಗಳ ಆತ್ಮಕ್ಕೆ ಶಾಂತಿ ಸಿಗಲಿ ಅಂತಾ ಪೋಷಕರು ಪ್ರಾರ್ಥನೆ ಸಲ್ಲಿಸಿದರು.

ಮಗಳ ಮೃತದೇಹ ದೊರೆಯುತ್ತಿದ್ದರೆ, ಆಕೆಗೆ ಮುಕ್ತಿ ಕೊಡಿಸುತ್ತಿದ್ದೇವು ಎಂದು ಅಂತಾ ಮಂಜುಳಾ ತಾಯಿ ಅಳಲು ತೊಡಿಕೊಂಡರು. ಅಂತ್ಯಸಂಸ್ಕಾರ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಓಡೋಡಿ ಬಂದ ಮದೆನಾಡು ಶಾಲೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಮೌನಾಚಾರಣೆ ಆಚರಿಸಿ, ಶ್ರದ್ಧಾಂಜಲಿ ಸಲ್ಲಿಸಿದರು. ಸಹೋದರ ಕೂಡ ತಂಗಿಯನ್ನು ನೆನಪಿಸಿಕೊಂಡು ಕಣ್ಣೀರು ಸುರಿಸಿದ್ದಾನೆ. ಮಂಜುಳಾ ಉತ್ತಮ ಥ್ರೋ ಬಾಲ್ ಆಟಗಾರ್ತಿಯಾಗಿದ್ದಳು.

ಸೋಮಯ್ಯ ಅವರು ತಮ್ಮ ಪುತ್ರಿ ಮಂಜುಳಾನ್ನು ವ್ಯಾಸಂಗಕ್ಕಾಗಿ ತಂಗಿಯ ಮನೆಯಲ್ಲಿ ಬಿಟ್ಟಿದ್ದರು. ಮದೆನಾಡು ಸರ್ಕಾರಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮಂಜುಳಾ, ಬಸಪ್ಪ-ಗೌರಮ್ಮ ದಂಪತಿ ಮನೆಯಲ್ಲಿ ಆಶ್ರಯ ಪಡೆದಿದ್ದಳು. ಆದರೆ ಆಗಸ್ಟ್ 17ರಂದು ಸುರಿದ ಮಹಾಮಳೆಗೆ ಬಸಪ್ಪ-ಗೌರಮ್ಮ ಅವರ ಪುತ್ರಿ ಮೋನಿಷಾ ಹಾಗೂ ಮಂಜುಳಾ ಕೊಚ್ಚಿ ಹೋಗಿದ್ದರು. ಮೃತ ದೇಹ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದಾಗ ಮಂಜುಳಾ ಶವ ಹೊರತುಪಡಿಸಿ, ಮೂವರ ದೇಹವೂ ದೊರೆತಿವೆ. ದಿನಗಳು ಕಳೆದರೂ ಮಂಜುಳಾ ಮೃತದೇಹ ಪತ್ತೆಯಾಗಲಿಲ್ಲ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *