ಮಾನವೀಯತೆ ಮೆರೆದ ಕೊಡಗಿನ ಉಸ್ತುವಾರಿ ಸಚಿವ ಸಾ.ರಾ ಮಹೇಶ್

ಮಡಿಕೇರಿ: ರಸ್ತೆ ಬದಿಯಲ್ಲಿ ಗಾಯಗೊಂಡು ಬಿದ್ದಿದ್ದ ಜಿಂಕೆಯ ರಕ್ಷಣೆಗೆ ಧಾವಿಸುವ ಮೂಲಕ ಪ್ರವಾಸೋದ್ಯಮ ಸಚಿವ ಸಾ.ರಾ ಮಹೇಶ್ ಅವರು ಮಾನವೀಯತೆ ಮೆರೆದಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡ ಬಳಿಕ ಇಂದು ಮೊದಲ ಬಾರಿಗೆ ಮಡಿಕೇರಿಗೆ ಭೇಟಿ ನೀಡುತ್ತಿದ್ದರು. ಈ ಸಂದರ್ಭದಲ್ಲಿ ಕುಶಾಲನಗರದ ಸಮೀಪದ ಆನೆಕಾಡು ರಸ್ತೆಯ ಮಾರ್ಗ ಮಧ್ಯೆ ಗಾಯಗೊಂಡು ಒದ್ದಾಡುತ್ತಿದ್ದ ಜಿಂಕೆಯನ್ನ ಸಚಿವರು ಗಮನಿಸಿದ್ದಾರೆ.

ವಿಚಾರಿಸಿದಾಗ ತಮಿಳುನಾಡು ಮೂಲದ ಟೂರಿಸ್ಟ್ ಗಾಡಿಯೊಂದು ಜಿಂಕೆಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ ಅನ್ನೋ ಮಾಹಿತಿ ಸಿಕ್ಕಿದೆ. ಕೂಡಲೇ ಜಿಂಕೆಯ ರಕ್ಷಣೆಗೆ ಧಾವಿಸಿದ ಸಚಿವರು, ಪರಿಶೀಲನೆ ನಡೆಸಿ ಅರಣ್ಯ ಅಧಿಕಾರಿಗಳಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದರು. ಅಲ್ಲದೇ ಬಾಯಾರಿದ ಜಿಂಕೆಗೆ ತಮ್ಮ ಬಳಿ ಇದ್ದ ಮಿನರಲ್ ನೀರನ್ನು ಕೈಯಾರೆ ಕುಡಿಸಿದರು.

ಜಿಂಕೆಯ ಬಲಗಾಲಿನಲ್ಲಿ ರಕ್ತ ಸುರಿಯುತ್ತಿರುವುದನ್ನ ಕಂಡು ಸಚಿವರು ಮರುಕ ವ್ಯಕ್ತಪಡಿಸಿದರು. ಈ ವೇಳೆಯಲ್ಲಿ ಕೊಡಗು ಡಿಸಿ ಶ್ರೀವಿದ್ಯಾ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸಚಿವರಿಗೆ ಸಾಥ್ ನೀಡಿದರು. ಕಷ್ಟದಲ್ಲಿದ್ದ ಜಿಂಕೆಯ ರಕ್ಷಣೆಗೆ ಧಾವಿಸಿದ ಸಚಿವರ ಮಾನವೀಯತೆಯ ನಡೆ ಅಲ್ಲಿ ನೆರೆದಿದ್ದವರ ಪ್ರಶಂಸೆಗೆ ಪಾತ್ರವಾಯಿತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Comments

Leave a Reply

Your email address will not be published. Required fields are marked *