ತುಮಕೂರು ಕಣದಿಂದ ಹಿಂದೆ ಸರಿಯಲು ಸಮ್ಮತಿಸಿದ ಕೆ.ಎನ್.ರಾಜಣ್ಣ!

ಬೆಂಗಳೂರು: ತುಮಕೂರು ಲೋಕಸಭಾ ಕ್ಷೇತ್ರದ ಕಣದಿಂದ ಹಿಂದಕ್ಕೆ ಸರಿಯಲು ಕೊನೆಗೂ ಕಾಂಗ್ರೆಸ್‍ನ ಮಾಜಿ ಶಾಸಕ ಕೆ.ಎನ್.ರಾಜಣ್ಣ ಒಪ್ಪಿಕೊಂಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಗರದ ಕಾವೇರಿ ನಿವಾಸಕ್ಕೆ ಕೆ.ಎನ್.ರಾಜಣ್ಣ ಅವರನ್ನು ಕರೆಸಿಕೊಂಡಿದ್ದರು. ಸುದೀರ್ಘ ಮಾತುಕತೆ ಹಾಗೂ ಸಂಧಾನದ ಫಲವಾಗಿ ಕೆ.ಎನ್.ರಾಜಣ್ಣ ಅವರು ಬಂಡಾಯ ಅಭ್ಯರ್ಥಿಯಾಗಿ ತುಮಕೂರು ಕ್ಷೇತ್ರದಲ್ಲಿ ಸಲ್ಲಿಸಿದ್ದ ನಾಮಪತ್ರ ವಾಪಸ್ ಪಡೆಯುವದಾಗಿ ತಿಳಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಅವರ ಜೊತೆಗೆ ನಡೆದ ಮಾತುಕತೆಯಿಂದಾಗಿ ಕೆ.ಎನ್.ರಾಜಣ್ಣ ಅವರು ನಾಳೆ ನಾಮಪತ್ರ ವಾಪಸ್ ಪಡೆಯಲಿದ್ದಾರೆ. ಇದೇ ವೇಳೆ ಹಾಲಿ ಸಂಸದ ಮುದ್ದಹನುಮೇಗೌಡ ಅವರಿಗೂ ಫೋನ್ ಮಾಡಿದ ಮಾಜಿ ಸಿಎಂ, ನಾಮಪತ್ರ ವಾಪಸ್ ಪಡೆಯುವಂತೆ ತಿಳಿಸಿದ್ದಾರೆ. ಆದರೆ ನಾಮಪತ್ರ ವಾಪಸ್ ಪಡೆಯುವ ಬಗ್ಗೆ ಮುದ್ದಹನುಮೇಗೌಡರು ಯಾವುದೇ ಸ್ಪಷ್ಟತೆ ಕೊಡಲಿಲ್ಲ ಎನ್ನಲಾಗಿದೆ.

ಕಾಂಗ್ರೆಸ್ ರಾಜ್ಯ ನಾಯಕರು ಸಂಸದ ಮುದ್ದಹನುಮೇಗೌಡರ ಮನವೊಲಿಕೆ ಭಾರೀ ಕಸರತ್ತು ಮಾಡುತ್ತಿದ್ದಾರೆ. ಆದರೆ ಮುದ್ದಹನುಮೇಗೌಡರು ಮಾತ್ರ ಯಾವುದೇ ನಾಯಕರ ಕೈಗೆ ಸಿಗದೇ ಸ್ಪರ್ಧೆಗೆ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *