ಸಹಾಯ ಹಸ್ತ ಚಾಚಿ ಮಾನವೀಯತೆ ಮೆರೆದ ಕೆಎಲ್ ರಾಹುಲ್

ಬೆಂಗಳೂರು: ಟೀಂ ಇಂಡಿಯಾ ಕೆಎಲ್ ರಾಹುಲ್ ಸತತ ವೈಫಲ್ಯಗಳನ್ನು ಅನುಭವಿಸಿ ಬ್ಯಾಟಿಂಗ್ ಫಾರ್ಮ್‍ಗೆ ಮರಳಲು ತೀವ್ರ ಒತ್ತಡವನ್ನು ಎದುರಿಸಿದ್ದಾರೆ. ಆದರೆ ಇದರ ನಡುವೆಯೇ ಸಂಕಷ್ಟದಲ್ಲಿದ್ದ ಟೀಂ ಇಂಡಿಯಾದ ಮಾಜಿ ಹಿರಿಯ ಆಟಗಾರನ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಟೀಂ ಇಂಡಿಯಾ ಮಾಜಿ ಆಟಗಾರ ಜೇಕಬ್ ಮಾರ್ಟಿನ್ ಅಪಘಾತಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೇಕಬ್ ಅವರ ಕುಟುಂಬ ಈ ವೇಳೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ಇದನ್ನು ಮನಗಂಡ ಹಲವು ಕ್ರಿಕೆಟ್ ಆಟಗಾರರು ಸಹಾಯ ನೀಡಿದ್ರು. ಇದರಂತೆ ಸದ್ಯ ಕೆಎಲ್ ರಾಹುಲ್ ಕೂಡ ಆರ್ಥಿಕವಾಗಿ ಸಹಾಯ ಮಾಡಿದ್ದು, ಈ ಕುರಿತು ಸಾರ್ವಜನಿಕವಾಗಿ ತಿಳಿಸದಂತೆ ಕುಟುಂಬ ಸದಸ್ಯರಲ್ಲಿ ಮನವಿ ಮಾಡಿದ್ದರು. ಆದರೆ ರಾಹುಲ್ ಅವರ ಸಹಾಯದ ಬಗ್ಗೆ ಮಾಧ್ಯಮದ ಮುಂದೆ ಜೇಕಬ್, 26 ವರ್ಷದ ರಾಹುಲ್ ಕಾರ್ಯಕ್ಕೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ ಜೇಕಬ್ ಪತ್ನಿ ಮಾತನಾಡಿ ರಾಹುಲ್ ಕೂಡ ನಮ್ಮ ಕುಟುಂಬದ ಸದಸ್ಯರಾಗಿದ್ದಾರೆ ಎಂದಿದ್ದಾರೆ.

ಜೇಕಬ್ ಕುಟುಂಬಕ್ಕೆ ರಾಹುಲ್ ಭಾರೀ ಮೊತ್ತ ಹಣ ನೀಡಿದ್ದಾರೆ ಎನ್ನುವುದು ಖಚಿತವಾಗಿದ್ದು, ಆದರೆ ಹಣದ ಮೊತ್ತದ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಈ ಹಿಂದೆ ಟೀಂ ಇಂಡಿಯಾ ಆಟಗಾರ ಕೃಣಾಲ್ ಪಾಂಡ್ಯ ಕೂಡ ಜೇಕಬ್ ಕುಟುಂಬಕ್ಕೆ ಖಾಲಿ ಚೆಕ್ ನೀಡಿದ್ದರು. ಅಲ್ಲದೇ ಬರೋಡಾ ಕ್ರಿಕೆಟ್ ಸಂಸ್ಥೆ 3 ಲಕ್ಷ ರೂ. ಹಾಗೂ ಮಾಜಿ ನಾಯಕ ಗಂಗೂಲಿ, ಕೋಚ್ ರವಿಶಾಸ್ತ್ರಿ ಕೂಡ ಸಹಾಯ ಮಾಡಿದ್ದರು.

1972 ಮೇ 11 ರಂದು ಗುಜರಾತಿನ ಬರೋಡಾದಲ್ಲಿ ಜನಿಸಿದ ಬಲಗೈ ಬ್ಯಾಟ್ಸ್ ಮನ್ ಜೇಕಬ್ ಮಾರ್ಟಿನ್ 1999ರಲ್ಲಿ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯದ ವೇಳೆ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು. ಒಟ್ಟು 10 ಏಕದಿನ ಪಂದ್ಯಗಳನ್ನು ಆಡಿದ್ದು, 22.57 ಸರಾಸರಿಯಲ್ಲಿ ಒಟ್ಟು 158 ರನ್ ಗಳಿಸಿದ್ದಾರೆ. ಗಂಗೂಲಿ ನಾಯಕತ್ವದಲ್ಲಿ 5 ಪಂದ್ಯ ಸಚಿನ್ ನಾಯಕತ್ವದಲ್ಲಿ ಮಾರ್ಟಿನ್ 5 ಪಂದ್ಯಗಳನ್ನು ಆಡಿದ್ದರು. 2011ರಲ್ಲಿ ಮಾನವ ಕಳ್ಳ ಸಾಗಾಣೆ ಆರೋಪದಡಿಯಲ್ಲಿ ದೆಹಲಿ ಪೊಲೀಸರು ಜೇಕಬ್ ಅವರನ್ನು ಬಂಧಿಸಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಅವರು ಬರೋಡದ ವಿವಿಧ ವಯೋಮಿತಿ ತಂಡಗಳಿಗೆ ತರಬೇತಿ ನೀಡುತ್ತಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *