ಸರ್ಜರಿಗೆ 5 ಸಾವಿರವಾಗುತ್ತೆ ಎಂದು ನಂತರ 15 ಸಾವಿರ ಕೊಡಿ ಅಂದ್ರು- ಕಿಮ್ಸ್ ನಿರ್ದೇಶಕ ದುಡ್ಡು ಪೀಕುತ್ತಿರುವ ವಿಡಿಯೋ ವೈರಲ್

ಕೊಪ್ಪಳ: ರಾಜ್ಯ ಸರ್ಕಾರ ಖಾಸಗಿ ಆಸ್ಪತ್ರೆಯಲ್ಲಿನ ಅಕ್ರಮಗಳಿಗೆ ಕಡಿವಾಣ ಹಾಕೋ ವಿಧೇಯಕ ಜಾರಿ ಮಾಡುತ್ತಿರೋ ಬೆನ್ನಲ್ಲೇ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯೊಂದರ ಅಕ್ರಮ ಬಟಾಬಯಲಾಗಿದೆ. ಬಡವರ ಪಾಲಿಗೆ ಸರ್ಕಾರಿ ಆಸ್ಪತ್ರೆ ಸಂಜೀವಿನಿ ಆಗಬೇಕಿತ್ತು. ಆದರೆ ಚಿಕಿತ್ಸೆಯ ನೆಪದಲ್ಲಿ ಕಿಮ್ಸ್ ನಿರ್ದೇಶಕ ದುಡ್ಡು ಪೀಕತ್ತಿರೋ ವಿಡಿಯೋ ಕೊಪ್ಪಳದಲ್ಲಿ ವೈರಲ್ ಆಗಿದೆ.

ಒಂದು ವಾರದ ಹಿಂದೆ ಕೊಪ್ಪಳ ನಿವಾಸಿಯಾಗಿರುವ ದೊಡ್ಡ ಬಸಪ್ಪ ಎಂಬವರು ತಮ್ಮ ಪತ್ನಿಯ ಕಾಲು ಮೂಳೆ ಮುರಿದಿದ್ದರಿಂದ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿನ ಎಲುಬು-ಕೀಲು ವೈದ್ಯರಾದ ಡಾ. ಗುರುರಾಜ ಎಂಬವರು ಶಸ್ತ್ರಚಿಕಿತ್ಸೆ ಮಾಡಬೇಕು. ಅದಕ್ಕೆ 5 ಸಾವಿರ ಆಗುತ್ತದೆ ಎಂದು ಹೇಳಿದ್ದರು. ದೊಡ್ಡಬಸಪ್ಪ ಅವರು ಚಿಕಿತ್ಸೆಗೆ ಒಪ್ಪಿಕೊಂಡಿದ್ದರು.

ಚಿಕಿತ್ಸೆ ಎಲ್ಲಾ ಮುಗಿದ ಮೇಲೆ ಕೇಳಿದಾಗ 15 ಸಾವಿರ ಕೊಡಬೇಕು ಎಂದು ಹೇಳಿದ್ದಾರೆ. ಇದರಿಂದ ಹೌಹಾರಿದ ದೊಡ್ಡಬಸಪ್ಪ ನೇರವಾಗಿ ಕೊಪ್ಪಳ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕರಾದ ಡಾ. ಎಸ್.ಎಂ ಮಲ್ಕಾಪುರೆ ಬಳಿ ಹೋಗಿ ಕೇಳಿದ್ದಾರೆ. ಆಗ ಮಲ್ಕಾಪುರೆ ಅವರು, ನಾವು ಶಸ್ತ್ರಚಿಕಿತ್ಸೆಗಾಗಿ ಸಾಮಾಗ್ರಿಗಳನ್ನು ಬೇರೆ ಕಡೆಯಿಂದ ತರೆಸಿದ್ದೇವೆ. ಅದಕ್ಕಾಗಿ 15 ಸಾವಿರವಾಗಿದೆ. ಇದೇ ಶಸ್ತ್ರಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯಲ್ಲಿ ಆಗಿದ್ದರೆ ನಿಮಗೆ ಒಂದು ಲಕ್ಷಕ್ಕಿಂತ ಹೆಚ್ಚಾಗುತ್ತಿತ್ತು ಎಂದು ಹೇಳುತ್ತಾ, ನಿಮಗಾಗಿ 15 ಸಾವಿರದಲ್ಲಿ ಮೂರು ಸಾವಿರ ಬಿಡುತ್ತೇವೆ 12 ಸಾವಿರ ಕೊಡಿ ಎಂದು ಹೇಳಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಇಷ್ಟೊಂದು ಹಣ ಕೊಡಬೇಕಾ ಎಂದು ಕೇಳಿದಕ್ಕೆ “ಕೊಡಬೇಕು ಸರ್, ಇಲ್ಲ ಅಂದರೆ ರೋಗಿ ಸಾಯುತ್ತಿದ್ದರು” ಅಂತಾ ಬಾಯಿಗೆ ಬಂದಂಗೆ ಮಾತಾನಾಡಿದ್ದಾರೆ. ಹೀಗೆ ಬಂದ ರೋಗಿಗಳ ಬಳಿ ನಿರ್ದೇಶಕರೇ ಹಣ ಪೀಕುತ್ತಿರುವುದು ಬಟಾಬಯಲಾಗಿದೆ. ಇಂತಹ ನಿರ್ದೇಶಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *