ಬಿಗ್‌ಬಾಸ್‌ಗೆ ರಿಲೀಫ್‌| ಜಾಲಿವುಡ್‌ ಸ್ಟುಡಿಯೋಸ್‌ ಓಪನ್‌ಗೆ ಡಿಸಿಎಂ ಸೂಚನೆ – ಧನ್ಯವಾದ ತಿಳಿಸಿದ ಕಿಚ್ಚ ಸುದೀಪ್‌

ಜಾಲಿವುಡ್‌ ಸ್ಟುಡಿಯೋಸ್‌ ಓಪನ್‌ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಸೂಚನೆ ನೀಡಿದ್ದು, ಬಿಗ್‌ಬಾಸ್‌ಗೆ ರಿಲೀಫ್‌ ಸಿಕ್ಕಿದೆ. ಮನವಿಗೆ ಸ್ಪಂದಿಸಿದ ಡಿಸಿಎಂಗೆ ಕಿಚ್ಚ ಸುದೀಪ್‌ ಧನ್ಯವಾದ ತಿಳಿಸಿದ್ದಾರೆ.

ಸುದೀಪ್‌ ಎಕ್ಸ್‌ ಪೋಸ್ಟ್‌ನಲ್ಲೇನಿದೆ?
ಸಕಾಲಿಕ ಸ್ಪಂದನೆಗಾಗಿ ಡಿ.ಕೆ.ಶಿವಕುಮಾರ್ ಸರ್‌ಗೆ ನಾನು ಹೃತ್ಪೂರ್ವಕವಾಗಿ ಧನ್ಯವಾದ ಹೇಳುತ್ತೇನೆ. ಇತ್ತೀಚಿನ ಅವ್ಯವಸ್ಥೆ ಅಥವಾ ಗೊಂದಲಗಳಲ್ಲಿ ಬಿಗ್‌ಬಾಸ್‌ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಕರೆಗೆ ತಕ್ಷಣ ಸ್ಪಂದಿಸಿದ್ದಕ್ಕಾಗಿ DCM ಅವರನ್ನು ನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ. ನಲಪಾಡ್‌ ಅವರ ಸಮರ್ಪಿತ ಪ್ರಯತ್ನಗಳಿಗೆ ಧನ್ಯವಾದಗಳು. ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಇಲ್ಲಿಯೇ ಇರುತ್ತದೆ ಎಂದು ಸುದೀಪ್‌ ಸಂದೇಶ ಹಂಚಿಕೊಂಡಿದ್ದಾರೆ.

ಪರಿಸರ ನಿಯಮ ಉಲ್ಲಂಘನೆ ಆರೋಪದಲ್ಲಿ ಜಾಲಿವುಡ್‌ ಸ್ಟುಡಿಯೋಸ್‌ ಬಂದ್‌ ಮಾಡಲಾಗಿತ್ತು. ಸ್ಟುಡಿಯೋಸ್‌ನಲ್ಲೇ ಇರುವ ಬಿಗ್‌ಬಾಸ್‌ ಮನೆಗೂ ಇದರ ಬಿಸಿ ತಟ್ಟಿತ್ತು. ಮನೆಯಲ್ಲಿದ್ದ ಎಲ್ಲಾ ಸ್ಪರ್ಧಿಗಳನ್ನು ಹೊರಗೆ ಹಾಕಲಾಗಿತ್ತು. ಇದು ಭಾರಿ ಚರ್ಚೆಗೆ ಕಾರಣವಾಗಿತ್ತು.

ಡಿಸಿಎಂ ಡಿಕೆ ಶಿವಕುಮಾರ್‌ ಅವರ ನಟ್ಟು ಬೋಲ್ಟು ಹೇಳಿಕೆ ಇದೇ ಹೊತ್ತಲ್ಲಿ ಚರ್ಚೆಗೆ ಬಂದಿತು. ಸುದೀಪ್ ಟಾರ್ಗೆಟ್ ಬಗ್ಗೆಯೇ ಬಿಸಿಬಿಸಿ ಚರ್ಚೆಯಾಗಿತ್ತು. ಕನ್ನಡ ಇಂಡಸ್ಟ್ರಿ ಟಾರ್ಗೆಟ್ ಮಾಡಿದ್ದಾರೆಂದು ಡಿಸಿಎಂ ಡಿಕೆ ಶಿವಕುಮಾರ್ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಆರೋಪಗಳ ಸುರಿಮಳೆ ಬಂದಿತ್ತು.

ಈಗ ಸ್ಟುಡಿಯೋಸ್‌ ಓಪನ್‌ಗೆ ಡಿಸಿಎಂ ಸೂಚನೆ ಕೊಟ್ಟಿದ್ದಾರೆ. ಅದಕ್ಕೆ, Thank U sir ಅಂತಾ ಸ್ವತಃ ಕಿಚ್ಚ ಸುದೀಪ್ ಡಿಸಿಎಂ ಡಿಕೆಶಿಗೆ ಧನ್ಯವಾದ ತಿಳಿಸಿದ್ದಾರೆ.