ಅಭಿಮಾನಿಗಳ ಪೈಶಾಚಿಕ ಕೃತ್ಯಕ್ಕೆ ಕಿಚ್ಚ ಸುದೀಪ್ ಪ್ರತಿಕ್ರಿಯೆ

ಬೆಂಗಳೂರು: ಕಿಚ್ಚ ಸುದೀಪ್ ಅಭಿಮಾನಿಗಳು ಪ್ರಾಣಿಗಳನ್ನು ಬಲಿ ಕೊಟ್ಟು ಕಟೌಟ್ ಹಾಗೂ ಪೋಸ್ಟರ್ ಗೆ ರಕ್ತದ ಅಭಿಷೇಕ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸದ್ಯ ಈಗ ಸುದೀಪ್ ತಮ್ಮ ಅಭಿಮಾನಿಗಳ ಈ ಪೈಶಾಚಿಕ ಕೃತ್ಯಕ್ಕೆ ಪ್ರತಿಕ್ರಿಯಿಸಿದ್ದಾರೆ.

ಅಭಿಮಾನಿಗಳ ಈ ಕೃತ್ಯಕ್ಕೆ ಕಿಚ್ಚ ಸುದೀಪ್ ಟ್ವಿಟ್ಟರಿನಲ್ಲಿ, “ಈ ರೀತಿಯ ಕೃತ್ಯಗಳನ್ನು ನಡೆಸುತ್ತಿರುವುದು ನಿಜಕ್ಕೂ ಅಮಾನವೀಯ. ನಾನು ನಿಮ್ಮ ಬಳಿ ಮನವಿ ಮಾಡಿಕೊಳ್ಳುತ್ತೇನೆ ದಯವಿಟ್ಟು ಇದನ್ನು ನಿಲ್ಲಿಸಿ. ವಿಲನ್ ಚಿತ್ರತಂಡ ನಿಮ್ಮ ಈ ರೀತಿಯ ಪ್ರೀತಿ ಹಾಗೂ ಗೌರವ ನೋಡಲು ಇಷ್ಟಪಡುವುದಿಲ್ಲ. ದಯವಿಟ್ಟು ಪ್ರಾಣಿಗಳನ್ನು ಬಲಿ ಕೊಡುವುದನ್ನು ನಿಲ್ಲಿಸಿ” ಎಂದು ಟ್ವೀಟ್ ಮಾಡಿ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ನೆಲಮಂಗಲದಲ್ಲಿ ದಿ-ವಿಲನ್ ಚಿತ್ರದ ಕಿಚ್ಚ ಸುದೀಪ್ ಕಟೌಟ್‍ಗೆ ಅಭಿಮಾನಿಗಳು ಮೇಕೆ ಬಲಿಕೊಟ್ಟು ರಕ್ತದ ಅಭಿಷೇಕ ಮಾಡಿ ಕೌರ್ಯ ಮೆರೆದರು. ಅಭಿಮಾನಿಗಳು ಮಾರಕಾಸ್ತ್ರಗಳನ್ನು ಬಳಸಿ ಮೇಕೆ ಬಲಿಕೊಟ್ಟು ರಕ್ತದ ಅಭಿಷೇಕ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನೂ ಓದಿ: ‘ದಿ-ವಿಲನ್’ ಚಿತ್ರದ ಕಿಚ್ಚ ಸುದೀಪ್ ಕಟೌಟಿಗೆ ಮೇಕೆ ಬಲಿಕೊಟ್ಟು ರಕ್ತದ ಅಭಿಷೇಕ

ಅಲ್ಲದೇ ಮತ್ತೊಂದು ಚಿತ್ರಮಂದಿರದ ಬಳಿ ಅಭಿಮಾನಿಗಳು ಕೋಣವನ್ನು ಬಲಿ ಕೊಟ್ಟಿದ್ದರು. ಥಿಯೇಟರ್ ಮುಂದೆ ಕೋಣದ ತಲೆಯನ್ನು ಒಂದೇ ಏಟಿಗೆ ಕತ್ತರಿಸಿ, ಬಳಿಕ ಆ ತಲೆಯನ್ನು ಹಿಡಿದು ಅಭಿಮಾನಿಯೊಬ್ಬ ವಿಲನ್ ಪೋಸ್ಟರ್ ಗೆ ರಕ್ತದ ಅಭಿಷೇಕ ಮಾಡಿದ್ದ. ಕೋಣ ಕಡಿದು ರಕ್ತದ ಅಭಿಷೇಕ ಮಾಡಿದ್ದು ಎಲ್ಲಿ ಎನ್ನುವುದು ತಿಳಿದು ಬಂದಿಲ್ಲ. ಆದರೆ ಈ ಕೃತ್ಯದ ಫೋಟೋ ಮತ್ತು ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಕೋಣ ಬಲಿ ಕೊಟ್ಟ ರಕ್ತದಿಂದ ವಿಲನ್ ಪೋಸ್ಟರಿಗೆ ಅಭಿಷೇಕ!

ಅಭಿಮಾನವಿದ್ದರೆ ಅನಾಥಾಶ್ರಮದಲ್ಲಿರುವ ಮಕ್ಕಳಿಗೆ ನಟನ ಹೆಸರಿನಲ್ಲಿ ಆಹಾರ ನೀಡಲಿ ಅಥವಾ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡಲಿ. ಅದನ್ನು ಬಿಟ್ಟು ಪ್ರಾಣಿಗಳನ್ನು ಸಾರ್ವಜನಿಕವಾಗಿ ಕಡಿದು ಅಜ್ಞಾನಿಗಳಂತೆ ವರ್ತಿಸಿರುವುದು ಸರಿಯಲ್ಲ ಎಂದು ಜನ ಕ್ರೌರ್ಯ ಮರೆದ ಅಭಿಮಾನಿಗಳ ವಿರುದ್ಧ ಕಿಡಿಕಾರುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *