ತಂದೆ ಕ್ಯಾಮೆರಾ ಆನ್ ಮಾಡಿದ್ರು, ಮಡದಿ ದೀಪ ಬೆಳಗಿಸಿದ್ರು- ಕಿಚ್ಚನ ಕೋಟಿಗೊಬ್ಬ 3 ಸಿನಿಮಾಗೆ ಅದ್ಧೂರಿ ಚಾಲನೆ

ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾಗೆ ಇಂದು ಅದ್ಧೂರಿ ಚಾಲನೆ ಸಿಕ್ಕಿದೆ.

ಕೋಟಿಗೊಬ್ಬ 3 ಸಿನಿಮಾ ಮಹೂರ್ತ ಇಂದು ಬೆಂಗಳೂರಿನ ಮಲ್ಲೇಶ್ವರಂ ಬಳಿ ಇರುವ ವೇಣುಗೋಪಾಲ ಸ್ವಾಮಿ ದೇವಾಲಯದಲ್ಲಿ ನಡೆಯಿತು. ಸಿನಿಮಾ ಆರಂಭದಲ್ಲೇ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಚಿತ್ರತಂಡಕ್ಕೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಕಳೆದ ವರ್ಷ ಕೋಟಿಗೊಬ್ಬ 2 ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭಾರೀ ಸದ್ದು ಮಾಡಿತ್ತು. ಈ ಸಿನಿಮಾದ ನಂತರ ಅದೇ ನಿರ್ಮಾಪಕರು ಹಾಗೂ ಕಿಚ್ಚ ಸೇರಿ ಕೋಟಿಗೊಬ್ಬ 3 ಚಿತ್ರ ಮಾಡಲು ನಿರ್ಧಾರ ಮಾಡಿದ್ದರು. ಈಗಾಗಲೇ ಸಾಕಷ್ಟು ವಿಚಾರಗಳಿಂದ ಕೋಟಿಗೊಬ್ಬ 3 ಸಿನಿಮಾ ಭಾರೀ ಸುದ್ದಿ ಮಾಡಿದೆ.

ಕೋಟಿಗೊಬ್ಬ 3 ಚಿತ್ರಕ್ಕೆ ಕುಟುಂಬದ ಹಾರೈಕೆ ಕೂಡ ಇದ್ದು, ಸಿನಿಮಾ ಮಹೂರ್ತದಲ್ಲಿ ಸುದೀಪ್ ಅವರ ತಂದೆ, ಆಪ್ತ ಸ್ನೇಹಿತರು ಹಾಗೂ ಪತ್ನಿ ಪ್ರಿಯಾ ಸುದೀಪ್ ಭಾಗಿಯಾಗಿದ್ದರು. ಚಿತ್ರಕ್ಕೆ ಸುದೀಪ್ ತಂದೆ ಕ್ಯಾಮೆರಾ ಸ್ವಿಚ್ ಆನ್ ಮಾಡಿದ್ರು. ಪತ್ನಿ ಪ್ರಿಯಾ ದೀಪ ಬೆಳಗಿಸಿ ಚಿತ್ರಕ್ಕೆ ಶುಭ ಹಾರೈಸಿದ್ರು.

ಸುದೀಪ್ ಕುಟುಂಬದ ಜೊತೆಯಲ್ಲಿ ಚಿತ್ರರಂಗದ ಕಡೆಯಿಂದ ನಿರ್ಮಾಪಕ ಮುನಿರತ್ನ, ರಾಕ್ ಲೈನ್ ವೆಂಕಟೇಶ್, ಸಿಆರ್ ಮನೋಹರ್ ಹಾಗೂ ಇನ್ನೂ ಅನೇಕ ಕಲಾವಿದರು ಭಾಗಿಯಾಗಿದ್ದರು. ಈ ಚಿತ್ರದಲ್ಲಿ ಹೊಸ ನಿರ್ದೇಶಕರಿಗೆ ಅವಕಾಶ ಮಾಡಿಕೊಟ್ಟಿದ್ದು, ನವ ನಿರ್ದೇಶಕ ಶಿವ ಕಾರ್ತಿಕ್ ಕೋಟಿಗೊಬ್ಬ 3 ಸಿನಿಮಾವನ್ನ ನಿರ್ದೇಶನ ಮಾಡುತ್ತಿದ್ದಾರೆ. ಸ್ವತಃ ಕಿಚ್ಚ ಸುದೀಪ್ ಚಿತ್ರಕ್ಕೆ ಕಥೆ ಬರೆಯುತ್ತಿದ್ದಾರೆ. ಈ ತಿಂಗಳ ಅಂತ್ಯಕ್ಕೆ ಸಿನಿಮಾ ಚಿತ್ರೀಕರಣ ಶುರು ಮಾಡಬೇಕೆಂದು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.

Comments

Leave a Reply

Your email address will not be published. Required fields are marked *