ಕೊಡಚಾದ್ರಿ ಬೆಟ್ಟಕ್ಕೆ ಪ್ರವಾಸಕ್ಕೆ ಬಂದಿದ್ದ ಕೇರಳದ ಯುವಕ ನಾಪತ್ತೆ

ಶಿವಮೊಗ್ಗ: ಮಲೆನಾಡ ಸುಂದರ ಪ್ರವಾಸಿ ತಾಣ ಕೊಡಚಾದ್ರಿ ಬೆಟ್ಟಕ್ಕೆ ಸ್ನೇಹಿತರ ಜೊತೆ ಪ್ರವಾಸಕ್ಕೆ ಬಂದಿದ್ದ ಕೇರಳ ಮೂಲದ ಯುವಕ ನಾಪತ್ತೆಯಾಗಿದ್ದಾನೆ.

ಕೇರಳದ ಕಣ್ಣೂರು ಜಿಲ್ಲೆಯ ತಲಚ್ಚೇರಿಯ ಲಿವಿಲ್ ರಾಜ್(27) ನಾಪತ್ತೆಯಾಗಿದ್ದಾನೆ. ಕಳೆದ 3 ದಿನಗಳ ಹಿಂದೆ ಮಲೆನಾಡ ಸುತ್ತಮುತ್ತಲ ಪ್ರದೇಶಕ್ಕೆ ಪ್ರವಾಸಕ್ಕೆಂದು 7 ಮಂದಿ ಸ್ನೇಹಿತರ ಜೊತೆ ಲಿವಿಲ್ ಬಂದಿದ್ದನು. ಆದರೆ ಭಾನುವಾರ ಕೊಡಚಾದ್ರಿ ಬೆಟ್ಟಕ್ಕೆ ಸ್ನೇಹಿತರ ಜೊತೆ ಲಿವಿಲ್ ಹೋಗಿದ್ದ ವೇಳೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾನೆ. ಸ್ನೇಹಿತ ನಾಪತ್ತೆ ಹಿನ್ನೆಲೆಯಲ್ಲಿ ಇತರೆ ಸ್ನೇಹಿತರು ಕೆಲ ಕಾಲ ಆತ ನಾಪತ್ತೆಯಾದ ಸ್ಥಳದಲ್ಲೇ ಹುಡುಕಾಟ ನಡೆಸಿದ್ದಾರೆ. ಆದರೆ ಯಾರಿಗೂ ಕೂಡ ಲಿವಿಲ್ ಸಿಕ್ಕಿಲ್ಲ. ತಮ್ಮ ಜೊತೆಗೇ ಇದ್ದವನು ಎಲ್ಲಿಗೆ ಹೋದ, ಏನಾದ ಎಂದು ಸ್ನೇಹಿತರಿಗೆ ತಿಳಿಯಲಿಲ್ಲ.

ಈ ಘಟನೆಯಿಂದ ಗಾಬರಿಗೊಂಡ ಸ್ನೇಹಿತರು ಲಿವಿಲ್ ಬಗ್ಗೆ ಆತನ ಪೋಷಕರಿಗೆ ವಿಷಯ ತಿಳಿಸಿ, ಕೇರಳಕ್ಕೆ ವಾಪಾಸ್ಸಾಗಿದ್ದಾರೆ. ಇತ್ತ ಮಗ ನಾಪತ್ತೆಯಾಗಿದ್ದಕ್ಕೆ ಸ್ವತಃ ಲಿವಿಲ್ ಪೋಷಕರು ಹಾಗು ಕೇರಳ ಪೊಲೀಸರು ಕೊಡಚಾದ್ರಿ ಬೆಟ್ಟಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸುತ್ತಿದ್ದಾರೆ. ಅವರಿಗೆ ಸ್ಥಳೀಯ ಪೊಲೀಸರು ಕೂಡ ಸಾಥ್ ಕೊಟ್ಟಿದ್ದಾರೆ. ಆದರೆ ಈವರೆಗೂ ಲಿವಿಲ್ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.

ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿರುವ ಕುಮಾರ ಪರ್ವತದಲ್ಲಿ ಚಾರಣಕ್ಕೆ ತೆರಳಿದ್ದ ಬೆಂಗಳೂರಿನ ಯುವಕನೊಬ್ಬ ನಾಪತ್ತೆಯಾಗಿದ್ದನು. ಬಿಕ ಆತನ ಪತ್ತೆಗೆ ಸಾಕಷ್ಟು ಹುಡುಕಾಟ ನಡೆದಿತ್ತು. ಆದರೆ ಎರಡು ದಿನಗಳ ಬಳಿಕ ಯುವಕ ತೀರ್ಥದ ಪೈಪ್ ಗುರುತಿನ ಮೂಲಕ ಸುಬ್ರಹ್ಮಣ್ಯಕ್ಕೆ ವಾಪಸ್ಸಾಗುವ ಮೂಲಕ ನಾಪತ್ತೆ ಪ್ರಕರಣ ಸುಖಾಂತ್ಯಗೊಂಡಿತ್ತು.

Comments

Leave a Reply

Your email address will not be published. Required fields are marked *