ಕಾರ್ ಡಿಕ್ಕಿ ರಭಸಕ್ಕೆ ಕೆಟಿಎಂ ಬೈಕ್ ಪೀಸ್ ಪೀಸ್- ಸ್ಥಳದಲ್ಲೇ ಸವಾರ ಸಾವು

ಚಾಮರಾಜನಗರ: ಕಾರು ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕೇರಳಾ ಮೂಲದ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಗುಂಡ್ಲುಪೇಟೆ ತಾಲೂಕಿನ ಬಸವಾಪುರ ಗ್ರಾಮದ ಬಳಿ ನಡೆದಿದೆ.

ಸುಲ್ತಾನ್ ಬತ್ತೇರಿ ನಿವಾಸಿ ತುಷಾರ್ (21) ಮೃತ ದುರ್ದೈವಿ. ಕಾರು ಹಾಗೂ ಬೈಕ್ ವೇಗವಾಗಿದ್ದರಿಂದಲೇ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಕೆಟಿಎಂ ಬೈಕ್ ಸ್ಕಿಡ್ ಆಗಿ ಬಿದ್ದ ಸವಾರರ ಮೇಲೆ ಹರಿದ ಐರಾವತ ಬಸ್

ತುಷಾರ್ ಕೆಟಿಎಂ ಬೈಕ್‍ನಲ್ಲಿ ಸುಲ್ತಾನ್ ಬತ್ತೇರಿಗೆ ಹೋಗುತ್ತಿದ್ದರು. ಇದೇ ವೇಳೆ ಕೆಂಪು ಬಣ್ಣದ ಕಾರು ಚಾಲಕ ವೇಗವಾಗಿ ಗುಂಡ್ಲುಪೇಟೆ ಕಡೆಗೆ ತೆರಳುತ್ತಿದ್ದರು. ಆದರೆ ಬಸವಾಪುರ ಗ್ರಾಮದ ಬಳಿ ಇಬ್ಬರೂ ನಿಯಂತ್ರಣ ತಪ್ಪಿದ ಪರಿಣಾಮ ಮುಖಾಮುಖಿ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಅಪಘಾತದ ರಭಸಕ್ಕೆ ಬೈಕ್ ನುಚ್ಚು ನೂರಾಗಿದ್ದು, ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅದೃಷ್ಟವಶಾತ್ ಕಾರಿನಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಗುಂಡ್ಲುಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ತುಷಾರ್ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿ, ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ.

Comments

Leave a Reply

Your email address will not be published. Required fields are marked *