ಸಂಸದೆ ಸುಮಲತಾ ಮುಂದೆ ಅಳಲು ತೋಡಿಕೊಂಡ ಜೆಡಿಎಸ್ ಅನರ್ಹ ಶಾಸಕ

ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಅವರನ್ನು ಜೆಡಿಎಸ್ ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ಭೇಟಿಯಾಗಿದ್ದು, ಅವರ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ನಾರಾಯಣಗೌಡ ಅವರು ಸುಮಲತಾ ಅವರನ್ನು ಗುರುವಾರ ಮಂಡ್ಯದ ಕೆಆರ್‍ಎಸ್‍ನ ಖಾಸಗಿ ಹೋಟೆಲ್ ನಲ್ಲಿ ಭೇಟಿಯಾಗಿದ್ದರು. ಈ ವೇಳೆ 1996 ರ ಕೆ.ಆರ್.ಪೇಟೆ ಉಪ ಚುನಾವಣೆ ಸನ್ನಿವೇಶವನ್ನು ಪ್ರಸ್ತಾಪಿಸಿ ಜೆಡಿಎಸ್ ನಾಯಕರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

1996 ರಲ್ಲಿ ಕೆ.ಆರ್.ಪೇಟೆ ಶಾಸಕರಾಗಿದ್ದ ಕೃಷ್ಣ ಲೋಕಸಭೆಗೆ ಹೋದ ಹಿನ್ನೆಲೆಯಲ್ಲಿ ಉಪ ಚುನಾವಣೆ ನಡೆದಿತ್ತು. ಆಗ ಜವರಾಯಿಗೌಡ ಎಂಬವರಿಗೆ ದೇವೇಗೌಡರು ಟಿಕೆಟ್ ಕೊಟ್ಟಿದ್ದರು. ಬಿ.ಪ್ರಕಾಶ್ ಜನತಾದಳದ ಬಂಡಾಯ ಅಭ್ಯರ್ಥಿ ಆಗಿ ಸ್ಪರ್ಧಿಸಿದ್ದರು. ಆದರೆ ದಳಪತಿಗಳು ಬಿ.ಪ್ರಕಾಶ್‍ಗೆ ಚುನಾವಣೆಯಲ್ಲಿ ಸಪೋರ್ಟ್ ಮಾಡಿ ಟಿಕೆಟ್ ಕೊಟ್ಟಿದ್ದ ಜವರಾಯಿಗೌಡರನ್ನು ಸೋಲಿಸಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕೊಟ್ಟು ಜೆಡಿಎಸ್ ನವರು ನನ್ನ ಸೋಲಿಸಲು ಹುನ್ನಾರ ನಡೆಸಿದ್ದರು. ಆದರೆ ದೇವರ ಆಶೀರ್ವಾದ ಇತ್ತು, ಹೀಗಾಗಿ ನಾನು ಗೆದ್ದೆ ಎಂದು ಸಂಸದೆ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಒಂದು ವೇಳೆ ನಾರಾಯಣಗೌಡ ಬಿಜೆಪಿ ಅಭ್ಯರ್ಥಿ ಆದರೆ ಅವರ ಪರ ಸುಮಲತಾ ಚುನಾವಣೆಯಲ್ಲಿ ಪ್ರಚಾರ ಮಾಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಕೆ.ಆರ್.ಪೇಟೆ ರಾಜಕೀಯ ಕಥೆಯನ್ನ ನಾರಾಯಣಗೌಡ ಸುಮಲತಾ ಜೊತೆ ಚರ್ಚಿಸಿದ್ದಾರೆ.

Comments

Leave a Reply

Your email address will not be published. Required fields are marked *