ಅಂತರ್‌ರಾಜ್ಯ ಕಳ್ಳರ ಬಂಧನ – ಲಕ್ಷಾಂತರ ಮೌಲ್ಯದ ಬಂಗಾರ ವಶ

ಕಾರವಾರ: ಕುಮಟ ಪಟ್ಟಣದಲ್ಲಿ ಇತ್ತೀಚೆಗೆ ನಡೆದಿದ್ದ ಕಳ್ಳತನ ಪ್ರಕಣರದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಚಿನ್ನಾಭರಣ ಮತ್ತು ನಗದನ್ನು ವಶಪಡಿಸಿಕೊಂಡಿದ್ದಾರೆ.

ಗೋಪಿ ಹಾಗೂ ಡೇವಿಡ್ ಫ್ರಾನ್ಸಿಸ್ ಬಂಧಿತ ಆರೋಪಿಗಳಾಗಿದ್ದಾರೆ. ಇವರಲ್ಲಿ ಗೋಪಿ ಬೆಂಗಳೂರಿನ ಭುವನೇಶ್ವರ ನಗರದ ಮಾಗಡಿ ನಿವಾಸಿ ಎಂದು ತಿಳಿದು ಬಂದಿದ್ದು, ಇನ್ನೊಬ್ಬ ಆರೋಪಿ ಡೇವಿಡ್ ಫ್ರಾನ್ಸಿಸ್ ತಮಿಳುನಾಡು ಮೂಲದವನಾಗಿದ್ದಾನೆ. ಮತ್ತೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಗಜಾನನ ಗೌರಯ್ಯ ಅವರ ಕುಟುಂಬಸ್ಥರು ಜನವರಿ 01 ರಂದು ಸೌದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಕಳ್ಳರು ಮನೆಯ ಬೀಗ ಮುರಿದು ಮನೆಯಲ್ಲಿದ್ದ ಸುಮಾರು ಮೂರು ತೊಲೆ ಬಂಗಾರ ಹಾಗೂ ಒಂದಿಷ್ಟು ಹಣವನ್ನು ಕದ್ದು ಪರಾರಿಯಾಗಿದ್ದರು.

ಈ ಬಗ್ಗೆ ಕುಮಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಕಾರ್ಯಾಚರಣೆಗೆ ಇಳಿದ ಕುಮಟ ಸಿಪಿಐ ಪರಮೇಶ್ವರ ಗುನಗಾ, ಪಿಎಸ್‍ಐ ಆನಂದ ಮೂರ್ತಿ ಅವರ ನೇತೃತ್ವದ ಪೊಲೀಸರ ತಂಡ ಪ್ರಕರಣ ನಡೆದ ಒಂದೇ ವಾರದಲ್ಲಿ ಕಳ್ಳತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಲವು ಕಳ್ಳತನ, ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳು, ಈ ಹಿಂದೆ ರಾಜ್ಯ ಹಾಗೂ ಹೊರ ರಾಜ್ಯದಲ್ಲಿ ಕಳ್ಳತನ ಹಾಗೂ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದರು ಎನ್ನುವುದು  ತನಿಖೆ ವೇಳೆ ತಿಳಿದು ಬಂದಿದೆ.

ಕುಮಟದಲ್ಲಿ ಕಳ್ಳತನ ಮಾಡುವ ಮುನ್ನ ಗೋವಾದಿಂದ ಬಂದಿರುವುದಾಗಿ ಹೇಳಲಾಗಿದ್ದು, ಕುಮಟಗೆ ಹೊರಡುವ ವೇಳೆ ಅಂಕೋಲಾದ ಕೇಬಲ್ ಆಫೀಸಿನ ಬಾಗಿಲು ಮುರಿದು ಕಳ್ಳತನಕ್ಕೆ ಯತ್ನಿಸಿದ್ದರು ಎಂದು ಪೊಲೀಸ್ ತನಿಖೆ ವೇಳೆ ಬಾಯಿ ಬಿಟ್ಟಿದ್ದಾರೆ. ಹೆಚ್ಚಿನ ತನಿಖೆ ಇನ್ನೂ ಪ್ರಗತಿಯಲ್ಲಿದೆ.

Comments

Leave a Reply

Your email address will not be published. Required fields are marked *