ಪರೀಕ್ಷಾ ಕೇಂದ್ರ ರಣಾಂಗಣ ಅಲ್ಲ ಕ್ರೀಡಾಂಗಣ: ವಿದ್ಯಾರ್ಥಿಗಳಿಗೆ ಸುರೇಶ್ ಕುಮಾರ್ ಕಿವಿಮಾತು

ಕಾರವಾರ: ಮಕ್ಕಳು ಪರೀಕ್ಷಾ ಕೇಂದ್ರವನ್ನು ರಣಾಂಗಣ ಎಂದು ಭಯಪಡದೇ ಕ್ರೀಡಾಂಗಣ ಎಂದು ತಿಳಿಯಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.

ಹೊನ್ನಾವರ ನ್ಯೂ ಇಂಗ್ಲಿಷ್ ಶಾಲೆಗೆ ಶನಿವಾರ ಭೇಟಿ ನೀಡಿದ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಎಸ್.ಎಸ್.ಎಲ್.ಸಿ ಪರೀಕ್ಷೆ ಇನ್ನು ಕೇವಲ 92 ದಿನಗಳಿದ್ದು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರವನ್ನು ರಣಾಂಗಣ ಎಂದು ಭಾವಿಸದೆ ಕ್ರೀಡಾಂಗಣ ಎಂದು ಪರಿಗಣಿಸಬೇಕು. ಪರೀಕ್ಷೆಗೆ ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ಪ್ರಸಕ್ತ ವರ್ಷ ಪೂರ್ವಸಿದ್ಧತಾ ಪರೀಕ್ಷೆಯನ್ನು ನಡೆಸುವ ಕೇಂದ್ರದಲ್ಲೇ ಪಬ್ಲಿಕ್ ಪರೀಕ್ಷೆ ನಡೆಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವ ವಾತಾವರಣ ಪರಿಚಿತವಾಗಿರುವುದರಿಂದ ಧೈರ್ಯವಾಗಿ ಎದುರಿಸಲು ಇದು ಸಹಕಾರಿಯಾಗಲಿದೆ. ನೆರೆ ರಾಜ್ಯಗಳಲ್ಲಿ ಇರುವಂತೆ ನಮ್ಮ ರಾಜ್ಯದಲ್ಲೂ ವಿದ್ಯಾರ್ಥಿಗಳ ಪೋಷಕರು ಪರೀಕ್ಷೆ ಮುಗಿಯುವವರೆಗೂ ಓದುವ ಸಮಯದಲ್ಲಿ ಟಿವಿ ನೋಡುವುದನ್ನು ನಿಲ್ಲಿಸುವ ಸಂಕಲ್ಪ ಮಾಡಬೇಕು ಎಂದರು.

ವಿದ್ಯಾರ್ಥಿಗಳು ಸಹ ಪರೀಕ್ಷೆ ಮುಗಿಯುವವರೆಗೂ ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕು ಎಂದು ಅವರ ಸಲಹೆ ನೀಡಿದರು. ಸಭೆಯಲ್ಲಿ ಶಾಸಕ ದಿನಕರ ಶೆಟ್ಟಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *