ಕರ್ನಾಟಕ ಟ್ಯಾಕ್ಸಿ ಡ್ರೈವರ್ ಆರ್ಗನೈಸೇಶನ್ ಬೆಂಗ್ಳೂರು ನಗರ ಘಟಕಕ್ಕೆ ಚಾಲನೆ

ನೆಲಮಂಗಲ: ಚಾಲಕರಿಂದ ನಿರ್ಮಾಣವಾಗಿರುವ ಚಾಲಕರ ಹಾಗೂ ಅವರ ಕುಟುಂಬದ ಯೋಗಕ್ಷೇಮ ಮತ್ತು ರಸ್ತೆಯಲ್ಲಿ ಚಾಲಕರು ಅನುಭವಿಸುವ ತೊಂದರೆಗಳನ್ನ ನೀಗಿಸುವ ನಿಟ್ಟಿನಲ್ಲಿ ಘಟಕವೊಂದು ನಿರ್ಮಾಣವಾಗಿದೆ. ಕರ್ನಾಟಕ ಟ್ಯಾಕ್ಸಿ ಡ್ರೈವರ್ ಆರ್ಗನೈಸೇಶನ್ ಬೆಂಗಳೂರು ನಗರ ಘಟಕಕ್ಕೆ ನೆಲಮಂಗಲ ಡಿವೈಎಸ್‍ಪಿ ಮೋಹನ್ ಕುಮಾರ್ ಹಾಗೂ ಟ್ರಾಫಿಕ್ ಸಿಪಿಐ ವೀರೇಂದ್ರ ಪ್ರಸಾದ್ ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬೆಂಗಳೂರು ಹೊರವಲಯ ನೆಲಮಂಗಲ ನಗರದ ಬಸವಣ್ಣ ದೇವರ ಮಠದ ಸಭಾಂಗಣದಲ್ಲಿ ಈ ಕಾರ್ಯಕ್ರಮವನ್ನ ಕಾರು ಚಾಲಕರ ಸಂಘದಿಂದ ಆಯೋಜಿಸಲಾಗಿತ್ತು. ಕರ್ನಾಟಕ ಟ್ಯಾಕ್ಸಿ ಡ್ರೈವರ್ ಆರ್ಗನೈಸೇಶನ್ ಮೂಲಕ ಈ ಸಂಘಟನೆಯೊಂದಿಗೆ ಕೈಜೋಡಿಸಿರುವ ಎಲ್ಲೋ ಟ್ಯಾಕ್ಸಿ ಚಾಲಕರಿಗೆ ಗುರುತಿನ ಚೀಟಿ ಹಾಗೂ ಆ ಚಾಲಕ ನಿರ್ವಹಣೆ ಮಾಡುವ ಕಾರಿಗೂ ಸದಸ್ಯತ್ವದ ಸ್ಟಿಕ್ಕರ್ ನೀಡಲಾಯಿತು.

ಈ ಸಂಘಟನೆ ಚಾಲಕರು ರಾಜ್ಯ ಹಾಗೂ ಹೊರ ರಾಜ್ಯಗಳಾದ ಆಂಧ್ರ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಕೆಲವು ರಾಜ್ಯದಲ್ಲಿ ತೊಂದರೆಗೆ ಒಳಗಾದರೆ ಕೂಡಲೇ ಸ್ಪಂದಿಸುವ ಕೆಲಸವನ್ನು, ಈ ಕರ್ನಾಟಕ ಟ್ಯಾಕ್ಸಿ ಡ್ರೈವರ್ ಆರ್ಗನೈಸೇಶನ್ ಮಾಡಲಿದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ರಮೇಶ್ ಕುಂದಾಪುರ ಹೇಳಿದರು.

ಚಾಲಕನಾಗಿ ಸೇವೆ ಸಲ್ಲಿಸುತ್ತಿದ್ದಾಗ ಅಪಘಾತದಲ್ಲಿ ಕಾಲು ಕಳೆದುಕೊಂಡ ಚಾಲಕರಿಗೆ ಕಷ್ಟದ ಸಮಯದಲ್ಲಿ ನೆರವಾಗಿ ಸ್ಪಂದಿಸುತ್ತಿರುವ ಮಲ್ಲಿಕಾರ್ಜುನ್ ಗೆ ಸನ್ಮಾನಿಸಿ ಗೌರವಿಸಿದರು. ಈ ವೇಳೆ ಡಿವೈಎಸ್ಪಿ ಮೋಹನ್ ಕುಮಾರ್, ಟ್ರಾಫಿಕ್ ಸಿಪಿಐ ವೀರೇಂದ್ರ ಪ್ರಸಾದ್, ಸಂಘಟನೆಯ ರಾಜ್ಯಾಧ್ಯಕ್ಷ ರಮೇಶ್ ಕುಂದಾಪುರ, ಕಾರ್ಮಿಕ ಇಲಾಖೆ ಸದಸ್ಯ ಎಂ.ಎಂ ಗೌಡ, ಸಂಘದ ಉಪಾಧ್ಯಕ್ಷ ಗಿರೀಶ್, ಗುರುರಾಜೇಂದ್ರ ಸೇರಿದಂತೆ ಐನೂರಕ್ಕೂ ಹೆಚ್ಚು ಚಾಲಕರು ಹಾಗೂ ಮಾಲೀಕರು ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *