ಭಾರೀ ಮಳೆಯಿಂದ ಅರಬ್ಬಿ ಸಮುದ್ರ ಪ್ರಕ್ಷುಬ್ಧ – ರಾಜ್ಯದ ವಿವಿಧೆಡೆ ಭೂಕುಸಿತ, ಭೂಮಿ ಕಂಪಿಸಿದ ಅನುಭವ

ಬೆಂಗಳೂರು: ರಾಜ್ಯದಲ್ಲಿ ಮುಂಗಾರಿನ ಅಬ್ಬರ ಮುಂದುವರಿದಿದೆ. ಬೆಂಗಳೂರು ಸೇರಿದಂತೆ ಹಲವೆಡೆ ಅಬ್ಬರದ ಮಳೆಯಾಗುತ್ತಿದೆ.

ರಾಜಧಾನಿ ಬೆಂಗಳೂರಿನ ಹಲವೆಡೆ ಮಧ್ಯಾಹ್ನ 3 ಗಂಟೆಗೆ ಹೊತ್ತಿಗೆ ಧಾರಾಕಾರ ಮಳೆ ಸುರಿದಿದೆ. ಕೆಲಕಾಲ ಸುರಿದ ಮಳೆಯಿಂದ ವಾಹನ ಸವಾರರು ಪರದಾಡಿದ್ರು. ಈ ಮಧ್ಯೆ ಕೊಡಗಿನಲ್ಲಿ ಮತ್ತೆ ಮಹಾಪ್ರವಾಹದ ಮುನ್ಸೂಚನೆ ಎಂಬಂತೆ 2018ರಲ್ಲಿ ಸಂಭವಿಸಿದ ದುರಂತದ ಸ್ಥಳದಲ್ಲೇ ಮತ್ತೆ ಭೂಕುಸಿತಗೊಂಡಿದೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೆಂಬು, ಪೆರಾಜೆ ಹಾಗೂ ಕರಿಕೆಯಲ್ಲಿ ಇವತ್ತು ಮಧ್ಯಾಹ್ನ 1.20ರ ಸುಮಾರಿಗೆ ಭಾರೀ ಶಬ್ದದೊಂದಿಗೆ ಮೂರ್ನಾಲ್ಕು ಸೆಕೆಂಡ್ ಭೂಮಿ ಕಂಪಿಸಿದ ಅನುಭವಾಗಿದೆ. ಜನ ಆತಂಕದಿಂದ ಮನೆಯಿಂದ ಹೊರಬಂದಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 7 ಬಾರಿ ಭೂಮಿ ಕಂಪಿಸಿದೆ. ಇದನ್ನೂ ಓದಿ: 8 ವರ್ಷಗಳಲ್ಲಿ ದೇಶದ ಒಟ್ಟು ಸಾಲ 102 ಲಕ್ಷ ಕೋಟಿ ರೂ. ಪ್ರತಿಯೊಬ್ಬರ ತಲೆ ಮೇಲೆ 1.70 ಲಕ್ಷ ರೂ. ಸಾಲ: ಸಿದ್ದು

ಮದೆನಾಡು-ಜೋಡುಪಾಲ ರಸ್ತೆ, ಬೆಟ್ಟತ್ತೂರು ಗ್ರಾಮದಲ್ಲಿ 10 ಅಡಿಯಷ್ಟು ಭೂಕುಸಿತವಾಗಿದೆ. ಮಡಿಕೇರಿ, ಸೋಮವಾರಪೇಟೆ, ವೀರಾಜಪೇಟೆ, ಪೊನ್ನಂಪೇಟೆ ಸೇರಿದಂತೆ ಹಲವೆಡೆ ಭಾರೀ ಮಳೆಯಾಗ್ತಿದ್ದು, ಬ್ರಹ್ಮಗಿರಿ ಬೆಟ್ಟ ಭಾಗದಲ್ಲೂ ಎಡಬಿಡದೆ ಮಳೆ ಸುರಿಯುತ್ತಿದೆ. ಭಾರೀ ಮಳೆಯಿಂದ ನದಿ ತೊರೆಗಳು ತುಂಬಿ ಹರಿಯುತ್ತಿದೆ. ಕಾವೇರಿ ನದಿ ನೀರಿನ ಮಟ್ಟ ಗಣನೀಯ ಏರಿಕೆಯಾಗಿದೆ. ಹಾರಂಗಿ ಜಲಾಶಯ ಭರ್ತಿಯಾಗಿದ್ದು ಶಾಸಕ ಅಪ್ಪಚ್ಚು ರಂಜನ್ ಬಾಗಿನ ಅರ್ಪಿಸಿದ್ರು. ಹಾರಂಗಿ ಡ್ಯಾಂನಿಂದ ನದಿಗೆ ನಾಲ್ಕು ಕ್ಲಸ್ಟರ್ ಗೇಟ್‍ಗಳ ಮೂಲಕ ಸುಮಾರು 1,200 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಇದನ್ನೂ ಓದಿ: ಪಾಕ್ ಪೊಲೀಸರಿಂದ 9 ಟೆರರಿಸ್ಟ್ ಬಂಧನ

ಭಾರೀ ಮಳೆಯಿಂದ ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಉಡುಪಿ, ಕಾರವಾರದ ಸಮುದ್ರ ತೀರದಲ್ಲಿ ಕಡಲ್ಕೊರೆತವಾಗಿದೆ. ಕಾರವಾರದ ಅಣಶಿ ಘಟ್ಟ ಪ್ರದೇಶದಲ್ಲಿ ಗುಡ್ಡ ಕುಸಿದಿದೆ. ಉಡುಪಿ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ 81 ಮಿಲಿಮೀಟರ್ ಸರಾಸರಿ ಮಳೆಯಾಗಿದೆ. ಜಿಲ್ಲೆಯಾದ್ಯಂತ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಅಲೆಗಳ ಅಬ್ಬರಕ್ಕೆ ನಾಡದೋಣಿ ಪುಡಿಯಾಗಿದೆ.

Live Tv

Comments

Leave a Reply

Your email address will not be published. Required fields are marked *