ಇನ್ನೂ ಮೂರ್ನಾಲ್ಕು ದಿನ ಮಹಾ ಮಳೆ: ಭೂಗರ್ಭ ತಜ್ಞರಿಂದ ಎಚ್ಚರಿಕೆ

ಬೆಂಗಳೂರು: ಕೊಡಗು, ಉತ್ತರ ಕನ್ನಡ, ಪಶ್ವಿಮ ಘಟ್ಟ ಹಾಗೂ ಮಹಾರಾಷ್ಟ್ರ ಭಾಗದಲ್ಲಿ ಇನ್ನೂ ಮೂರ್ನಾಲ್ಕು ದಿನಗಳ ಕಾಲ ಮಳೆಯಾಗಲಿದೆ ಎಂದು ಭೂಗರ್ಭ ತಜ್ಞ ಎಚ್.ಎನ್ ಪ್ರಕಾಶ್ ಎಚ್ಚರಿಕೆ ನೀಡಿದ್ದಾರೆ.

ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಕಳೆದ ವರ್ಷ ಕೊಡಗಿನಲ್ಲಿ ಉಂಟಾಗಿದ್ದಂತೆ ಈ ವರ್ಷವೂ ಭೂಕುಸಿತ, ಪ್ರವಾಹ ಮರುಕಳಿಸುತ್ತವೆ ಎಂದು ನಾನು ಈ ಹಿಂದೆಯೇ ಹೇಳಿದ್ದೆ. ಹವಾಯಿ ದೇಶದಲ್ಲಾದ ಜ್ವಾಲಾಮುಖಿ ಸ್ಫೋಟದಿಂದ ಕಳೆದ ವರ್ಷ ಕೇರಳ ಮತ್ತು ಮಡಿಕೇರಿಯಲ್ಲಿ ಭೂ ಕುಸಿತ, ಪ್ರವಾಹವಾಗಿತ್ತು. ಇದೀಗ ಆಗುತ್ತಿರುವ ಮೇಘ ಸ್ಫೋಟಕ್ಕೆ ಕಾರಣ ಮಾನ್ಸೂನ್ ಲಕ್ಷಣವಲ್ಲ. ಪಪುವ ನ್ಯೂ ಗಿನಿಯಾದಲ್ಲಾದ ಉಲಾವನ್ ಆಗಸ್ಟ್ 1 ರಿಂದ 3-4 ದಿನ ದೊಡ್ಡ ಜ್ವಾಲಾಮುಖಿ ಸ್ಫೋಟವಾಗಿದೆ. ಇದೇ ಇಂದಿನ ಮಹಾ ಮಳೆ, ಪ್ರವಾಹಕ್ಕೆ ಕಾರಣ ಎಂದು ಎಚ್.ಎನ್ ಪ್ರಕಾಶ್ ಮಾಹಿತಿ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ ಮಳೆರಾಯ ತನ್ನ ಅಬ್ಬರವನ್ನು ಮುಂದುವರಿಸಿದ್ದಾನೆ. ಹೀಗಾಗಿ ಉತ್ತರ ಕರ್ನಾಟಕಕ್ಕೆ ಮತ್ತೆ ಪ್ರವಾಹದ ಭೀತಿ ಎದುರಾಗಲಿದೆ. 2010ರಲ್ಲಿ ಉಂಟಾಗಿದ್ದ ಮಹಾ ಮಳೆಗೆ ರಾಯಚೂರು ಮಂತ್ರಾಲಯ ಮುಳುಗಿತ್ತು ಎಂದು ಅವರು ನೆನೆದರು.

ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್‍ರೆಡ್ಡಿ ಅವರು ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿ, ರಾಜ್ಯದ ಎಲ್ಲಾ ಭಾಗದಲ್ಲಿಯೂ ಆಗಸ್ಟ್ 8ರಂದು 64.55 ಮೀ.ಮೀ ಗಿಂತ ಹೆಚ್ಚಿನ ಪ್ರಮಾಣದ ಮಳೆಯಾಗುತ್ತದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ತಿಳಿಸಿತ್ತು. ಆಗಸ್ಟ್ 9ರಿಂದ ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯ ತೀವ್ರತೆ ಕಡಿಮೆಯಾಗಲಿದೆ. ಆದರೆ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ವರುಣನ ಅಬ್ಬರ ಮುಂದುವರಿಯಲಿದೆ. ಆಗಸ್ಟ್ 10ರಂದು ರಾಜ್ಯದ ಎಲ್ಲಾ ಭಾಗದಲ್ಲಿಯೂ ಮಳೆಯ ತೀವ್ರತೆ ಕಡಿಮೆಯಾಗಲಿದೆ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *