ಕರಾವಳಿ, ಮಲೆನಾಡಲ್ಲಿ ಭೂಕುಸಿತದ ಭೀತಿ- ಗುಡ್ಡ ಕುಸಿದು ಬಡವಾಗಿದೆ ಚಾರ್ಮಾಡಿ

ಮಂಗಳೂರು: ಕಳೆದ ಒಂದು ವಾರದಿಂದ ಸುರಿದ ಧಾರಕಾರ ಮಳೆಗೆ ಕರಾವಳಿ, ಮಲೆನಾಡು ನಲುಗಿ ಹೋಗಿದೆ. ಮಡಿಕೇರಿಯಂತೆ ಈಗ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಲ್ಲೂ ಭೂಮಿ ಬಿರುಕು ಬಿಟ್ಟಿದೆ.

ಪುತ್ತೂರಿನ ತೆಂಕಿಲ ಗೇರು ನಿಗಮಕ್ಕೆ ಸೇರಿದ ಜಾಗದಲ್ಲಿ ಭೂಮಿ ಬಿರುಕು ಬಿಟ್ಟಿದೆ. ಬಿರುಕು ಬಿಟ್ಟ ಪ್ರದೇಶ ಅಪಾಯಕಾರಿ ಎಂದು ಭೂ ವಿಜ್ಞಾನಿಗಳು ಹೇಳಿದ್ದಾರೆ. ನೀರಿನ ಒತ್ತಡದಿಂದ ಭೂಗರ್ಭದಲ್ಲಿ ಬಿರುಕು ಬಿಟ್ಟಿರುವ ಸಾಧ್ಯತೆಯಿದ್ದು, ಹಾಗಾಗಿ ಸ್ಥಳೀಯ ನಿವಾಸಿಗಳ ತೆರವಿಗೆ ಸೂಚಿಸಲಾಗಿದೆ.

ಭಾರೀ ಮಳೆಯಿಂದಾಗಿ ಚಾರ್ಮಾಡಿ ಘಾಟ್‍ನ ಅಲ್ಲಲ್ಲಿ ಭೂಕುಸಿತವಾಗಿದ್ದು, ರಸ್ತೆ ಸಂಪರ್ಕ ಕಡಿತವಾಗಿದೆ. ತಿರುವುಗಳಲ್ಲಿ ಭೂಭಾಗ ಬಾಯ್ತೆರೆದಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ. ಶತಮಾನಗಳಿಂದಲೂ ತನ್ನ ಸೌಂದರ್ಯ ಉಳಿಸಿಕೊಂಡಿದ್ದ ಚಾರ್ಮಾಡಿ ಘಾಟ್‍ನಲ್ಲಿ ಈಗ ಗುಡ್ಡ ಕುಸಿತವೇ ಕಣ್ಣಿಗೆ ರಾಚುತ್ತಿದೆ.

ಬನ್ಕಲ್ ವ್ಯಾಪ್ತಿಯಲ್ಲಿ ರಸ್ತೆ ಅಂಚು ವಿಪರೀತ ಕುಸಿತಗೊಂಡಿರುವ ಕಾರಣ ತೆರವು ಕಾರ್ಯಾಚರಣೆಗೂ ಅಡ್ಡಿಯಾಗುತ್ತಿದೆ. ಆದರೆ ಚಾರ್ಮಾಡಿ ಮತ್ತೆ ಯಥಾಸ್ಥಿತಿಗೆ ಬರಲು ಇನ್ನೂ ಆರು ತಿಂಗಳಾದರೂ ಬೇಕು ಎಂದು ಹೇಳಲಾಗುತ್ತಿದೆ.

ಇತ್ತ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಭಾರೀ ಮಳೆಯಾದ ಹಿನ್ನೆಲೆಯಲ್ಲಿ 4 ಎಕರೆ ಭೂಮಿ ಬಿರುಕು ಬಿಟ್ಟಿದೆ. ಭಾನ್ಕುಳಿ ಗ್ರಾಮದಲ್ಲಿ ಭೂಮಿ ಬಿರುಕು ಬಿಟ್ಟಿದೆ. ಕ್ಷಣ ಕ್ಷಣಕ್ಕೂ ಕುಸಿಯುತಿದ್ದು ಇನ್ನೂ ಹೆಚ್ಚಿನ ಭಾಗ ಕುಸಿಯುವ ಹಂತ ತಲುಪಿದೆ. ದೊಡ್ಡ ದೊಡ್ಡ ಕಂದಕಗಳು ನಿರ್ಮಾಣವಾಗಿದೆ.

Comments

Leave a Reply

Your email address will not be published. Required fields are marked *