ರಾತ್ರೋರಾತ್ರಿ ಸಾಲಮನ್ನಾ ಹಣವನ್ನ ಜಮೆ ಮಾಡಲು ದುಡ್ಡಿನ ಮರ ಬೆಳೆದಿಲ್ಲ: ಎಚ್‍ಡಿಕೆ

ಬೆಂಗಳೂರು: ರೈತರ ಸಾಲಮನ್ನಾ ಹಣವನ್ನು ರಾತ್ರೋರಾತ್ರಿ ಖಾತೆಗೆ ಜಮೆ ಮಾಡಲು ನಾನು ದುಡ್ಡಿನ ಮರ ಬೆಳೆದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ವಸಂತನಗರ ಅಂಬೇಡ್ಕರ್ ಭವನದಲ್ಲಿ ಆಯೋಜನೆಗೊಂಡಿದ್ದ 24ನೇ ವಿಶ್ವ ಆದಿವಾಸಿ ದಿನಾಚರಣೆ ಹಾಗೂ ಅಲೆಮಾರಿ ಆದಿವಾಸಿಗಳ ಕಲಾಮೇಳದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾಲಮನ್ನಾದ 49 ಸಾವಿರ ಕೋಟಿ ರೂ. ಸಿದ್ಧಮಾಡಲು ಕಷ್ಟಪಡುತ್ತಿರುವೆ. ಆದರೆ ಕೆಲವರು ಕುಮಾರಸ್ವಾಮಿ ಇನ್ನು ತಮ್ಮ ಖಾತೆಗೆ ಹಣ ಪಾವತಿ ಮಾಡಲಿಲ್ಲ ಎಂದು ದೂರುತ್ತಿದ್ದಾರೆ. ಹಣವನ್ನು ಹೊಂದಿಸಲು ಅಧಿಕಾರಿಗಳ ಜೊತೆ ಚರ್ಚೆ ಮಾಡಬೇಕು. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಗರಂ ಆಗಿ ಹೇಳಿದರು.

ಸಾಲಮನ್ನಾ ಘೋಷಣೆ ಮಾಡಿದ ದಿನದ ರಾತ್ರಿಯೇ ಖಾತೆಗೆ ಹಣ ಹಾಕಬೇಕು ಅಂದರೇ ಹೇಗೆ? ನಾನು ದುಡ್ಡಿನ ಮರ ಬೆಳೆದಿಲ್ಲ. ನಾನು ಅನುಭವಿಸುತ್ತಿರುವ ಕಷ್ಟ ನನಗೆ ಮಾತ್ರ ಗೊತ್ತು. ಆದರೆ ಇದನ್ನು ಹೇಳಿಕೊಳ್ಳುವಂತಿಲ್ಲ ಎಂದ ಅವರು, ಸರ್ಕಾರಕ್ಕೆ ಗೊತ್ತಿಲ್ಲ, ಗುರಿ ಇಲ್ಲವೆಂದು ಅನೇಕರು ಟೀಕೆ ಮಾಡುತ್ತಿದ್ದಾರೆ. ಅಧಿಕಾರಿಗಳನ್ನು ಒಪ್ಪಿಸದೇ ಹಣ ಹೊಂದಿಸುವುದು ಕಷ್ಟ ಎಂದು ಹೇಳಿದರು.

ನಾನು ರೈತರ ಸಾಲಮನ್ನಾ ವಿಚಾರದಲ್ಲಿ ಹುಡುಗಾಟಿಕೆ ಆಡುತ್ತಿಲ್ಲ. ಹಣ ಸಿದ್ಧಪಡಿಸುವ ವಿಧಾನ ನನಗೆ ಗೊತ್ತು. ಆದರೆ ಅಧಿಕಾರಿಗಳ ಪಾತ್ರವು ಅಷ್ಟೇ ಅಗತ್ಯವಾಗಿದೆ. ಸಾಲಮನ್ನಾ ಹಣದ ಕುರಿತಾಗಿ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ, ಕೆಲವೇ ದಿನಗಳಲ್ಲಿ ರೈತರ ಖಾತೆಗೆ ಹಣ ಪಾವತಿ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Comments

Leave a Reply

Your email address will not be published. Required fields are marked *