ರಾಹುಲ್ ನಡೆಯನ್ನು ಕರ್ನಾಟಕ ಶಾಸಕರು ಅನುಸರಿಸಿದ್ದಾರೆ – ರಾಜನಾಥ್ ಸಿಂಗ್

– ಶಾಸಕರ ರಾಜೀನಾಮೆಯಲ್ಲಿ ಬಿಜೆಪಿ ಪಾತ್ರವಿಲ್ಲ

ನವದೆಹಲಿ: ಕರ್ನಾಟಕದಲ್ಲಿ ಸರ್ಕಾರ ಬೀಳಿಸಲು ನಾವು ಪ್ರಯತ್ನ ನಡೆಸುತ್ತಿಲ್ಲ ಎಂದು ಲೋಕಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಲೋಕಸಭಾ ಅಧಿವೇಶನಲ್ಲಿ ಮಾತನಾಡಿದ ಅವರು, ಮತ್ತೊಂದು ರಾಜಕೀಯ ಪಕ್ಷದ ಸಂಸದರು ಅಥವಾ ಶಾಸಕರ ಮೇಲೆ ಒತ್ತಡ ಹೇರುವ ಮೂಲಕ ಪಕ್ಷಕ್ಕೆ ತರುವ ಪ್ರಯತ್ನವನ್ನು ನಾವು ಮಾಡಿಲ್ಲ. ಕರ್ನಾಟಕದ ಶಾಸಕರ ರಾಜೀನಾಮೆಯಲ್ಲಿ ನಮ್ಮ ಪಾತ್ರವಿಲ್ಲ. ರಾಹುಲ್ ಗಾಂಧಿ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ರಾಜೀನಾಮೆ ನೀಡುವ ಟ್ರೆಂಡ್ ಆರಂಭಗೊಂಡಿತು ಎಂದು ಕಾಂಗ್ರೆಸ್ ನಾಯಕರ ಕಾಲೆಳೆದರು. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ನಿಲ್ಲದ ರಾಜೀನಾಮೆ ಪರ್ವ- ರಾಹುಲ್ ಆಪ್ತ ಮಿಲಿಂದ್, ಸಿಂಧಿಯಾ ರಾಜೀನಾಮೆ

ಕರ್ನಾಟಕದಲ್ಲಿ ನಡೆಯುತ್ತಿರುವ ಬೆಳವಣಿಗೆಗೂ ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ನಮ್ಮ ಪಕ್ಷ ಎಂದಿಗೂ ಕುದುರೆ ವ್ಯಾಪಾರದಲ್ಲಿ ತೊಡಗಿಲ್ಲ. ಸಂಸದೀಯ ಪ್ರಜಾಪ್ರಭುತ್ವದ ಘನತೆಯನ್ನು ಕಾಪಾಡಿಕೊಳ್ಳಲು ನಾವು ಬದ್ಧರಾಗಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

ಈ ವೇಳೆ ಕಾಂಗ್ರೆಸ್ ಸಂಸದರು ಗಲಾಟೆ ಆರಂಭಿಸಿ, ಪ್ರಜಾಪ್ರಭುತ್ವ ರಕ್ಷಿಸಿ ಎಂದು ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. ಇತ್ತ ಅಕ್ಕ-ಪಕ್ಕದಲ್ಲಿಯೇ ಕುಳಿತಿದ್ದ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಏನು ಮಾತನಾಡುತ್ತಿದ್ದಾರೆ ಎಂಬಂತೆ ಕೈ ಸನ್ನೆ ಮಾಡಿ ಅಸಮಾಧಾನ ಹೊರ ಹಾಕಿದರು.

Comments

Leave a Reply

Your email address will not be published. Required fields are marked *