ಸಚಿವ ಸ್ಥಾನ ಆಯ್ಕೆ ಮಾನದಂಡ – `ಕೈ’ ನಾಯಕರ ವಿರುದ್ಧ ಎಸ್ ಆರ್ ಪಾಟೀಲ್ ಗರಂ

ಪಬ್ಲಿಕ್ ಟಿವಿ
ಬೆಂಗಳೂರು: ಕಾಂಗ್ರೆಸ್ ಪಕ್ಷದ ಸಚಿವ ಖಾತೆಯ ಪಟ್ಟಿ ಅಂತಿಮವಾಗುತ್ತಿದಂತೆ ಅಸಮಾಧಾನ ಸ್ಫೋಟಗೊಂಡಿದ್ದು, ಪಕ್ಷದ ಪ್ರಮುಖ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಶಾಸಕ ಎಸ್ ಆರ್ ಪಾಟೀಲ್ ಸಹ ಅಸಮಾಧಾನ ಹೊರ ಹಾಕಿದ್ದಾರೆ.

ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿರುವ ಎಸ್ ಆರ್ ಪಾಟೀಲ್, ಇದೇ ವೇಳೆ ಜಾತ್ಯಾತೀತ ತತ್ವವನ್ನು ಹೊಂದಿರುವ ದೇಶದಲ್ಲಿ ಸಚಿವ ಖಾತೆಗಳನ್ನು ಜಾತಿ ಆಧಾರದ ಮೇಲೆ ಹಂಚಿಕೆ ಮಾಡುತ್ತಿರುವುದು ಉತ್ತಮವಲ್ಲ. ಆದರೆ ಎಐಸಿಸಿ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರು ಖಾತೆ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಉತ್ತಮ ನಾಯಕರನ್ನು ಆಯ್ಕೆ ಮಾಡಿರುತ್ತಾರೆ. ಅದ್ದರಿಂದ ಯಾವುದೇ ಜವಾಬ್ದಾರಿ ನೀಡಿದರೂ ಮಾಡಬೇಕು ಎಂಬ ಅಭಿಪ್ರಾಯಪಟ್ಟರು.

ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಪಕ್ಷ ವಿಫಲವಾಗಿದೆ. ಹೆಚ್ಚು ಸ್ಥಾನ ಪಡೆದಿದ್ದರೆ ನಮ್ಮ ಪಕ್ಷವೇ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡುತಿತ್ತು. ಆದರೆ ಇದು ಸಾಧ್ಯವಾಗಿಲ್ಲ. ಅದ್ದರಿಂದ ಉತ್ತರ ಕರ್ನಾಟಕದಲ್ಲಿ ಪಕ್ಷ ಮುಂದಾಳತ್ವ ವಹಿಸಿದ್ದ ನಾನು ನೈತಿಕ ಹೊಣೆ ಹಾಗೂ ಜವಾಬ್ದಾರಿ ಯಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.

ಇಂಧನ ಖಾತೆ ಹಗ್ಗ ಜಗ್ಗಾಟ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದ ಪ್ರಮುಖ ನಾಯಕರೇ ಏಕೆ ಖಾತೆಗಾಗಿ ಕಿತ್ತಾಟ ನಡೆಸಿದ್ದಾರೆ ಎಂಬುವುದು ತಿಳಿದು ಬಂದಿಲ್ಲ. ಜನರ ಸೇವೆ ಮಾಡಲು ಸಚಿವ ಸ್ಥಾನವೇ ಅಗತ್ಯವಿಲ್ಲ. ಯಾವುದೇ ಸ್ಥಾನ ಪಡೆದರು ಸೇವೆ ಮಾಡಬಹುದು. ಮಂತ್ರಿ ಆಗದೇ ಇದ್ದರೆ ಏಕೆ ನಿರಾಸೆಯಾಗಬೇಕು ಎಂದು ಪ್ರಶ್ನಿಸಿದರು.

ಕ್ಷೇತ್ರದ ಜನರು ನಾಲ್ಕು ಬಾರಿ ನನ್ನನು ಆಯ್ಕೆ ಮಾಡಿದ್ದಾರೆ. ಅವರ ಸೇವೆ ಮಾಡುವುದು ನನ್ನ ಕರ್ತವ್ಯ. ಇದಕ್ಕಾಗಿ ಮಂತ್ರಿ ಸ್ಥಾನದ ಅಗತ್ಯವಿಲ್ಲ. ಸಚಿವ ಸಂಪುಟದ ಪ್ರಮಾಣ ವಚನ ಸಮಾರಂಭಕ್ಕೆ ತಮಗೂ ಆಹ್ವಾನ ನೀಡಿದ್ದಾರೆ. ಪ್ರಮಾಣ ವಚನ ಸಮಾರಂಭಕ್ಕೆ ನಾನು ಹೋಗುತ್ತೇನೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *