ಕಾಂಗ್ರೆಸ್ಸಿನಲ್ಲಿ ಮುಗಿದಿಲ್ಲ ಸಿದ್ದು ವರ್ಸಸ್ ಮೂಲ ಕಾಂಗ್ರೆಸ್ಸಿಗರ ರಗಳೆ

ಬೆಂಗಳೂರು: ಕರ್ನಾಟಕ ಕಾಂಗ್ರೆಸ್‍ನಲ್ಲಿ ವಲಸಿಗ ಮತ್ತು ಮೂಲ ಕಾಂಗ್ರೆಸ್ ಫೈಟ್ ಜೋರಾಗಿ ನಡೆಯುತ್ತಲೇ ಇದೆ. ದಿನೇ ದಿನೇ ಈ ಕಲಹ ದೊಡ್ಡದಾಗಿ ಹೋಗುತ್ತಿದೆ. ಹೇಗಾದರೂ ಮಾಡಿ ವಲಸಿಗ ಸಿದ್ದರಾಮಯ್ಯಗೆ ಅಧಿಕಾರ ಕೈ ತಪ್ಪಿಸಬೇಕು ಅಂತ ಮೂಲ ಕಾಂಗ್ರೆಸ್ ಟೀಂ ಓಡಾಡುತ್ತಿದೆ. ಇನ್ನೊಂದು ಕಡೆ ಮೂಲಕ ಕಾಂಗ್ರೆಸ್ಸಿಗರಿಗೆ ಟಕ್ಕರ್ ಕೊಡೋಕೆ ಸಿದ್ದರಾಮಯ್ಯ ಅಂಡ್ ಟೀಂ ಕೆಲಸ ಮಾಡುತ್ತಲೇ ಇದೆ. ಈಗ ಎರಡು ಟೀಂಗಳ ಮಧ್ಯೆ ವಿಪಕ್ಷ ನಾಯಕ ಮತ್ತು ಶಾಸಕಾಂಗ ಪಕ್ಷದ ನಾಯಕನ ವಾರ್ ಪ್ರಾರಂಭವಾಗಿದೆ.

ಉಪ ಚುನಾವಣೆ ಸೋಲಿನ ಬಳಿಕ ನೈತಿಕತೆ ಹೊತ್ತು ಸಿದ್ದರಾಮಯ್ಯ ವಿಪಕ್ಷ ಸ್ಥಾನ ಮತ್ತು ಶಾಸಕಾಂಗ ನಾಯಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ಕೊಟ್ಟ ಕೂಡಲೇ ಮೂಲಕ ಕಾಂಗ್ರೆಸ್ ನಾಯಕರು ಅ ಎರಡು ಸ್ಥಾನಕ್ಕೆ ಮೂಲ ಕಾಂಗ್ರೆಸ್ಸಿಗೆ ಕೊಡಬೇಕು ಅಂತ ಹೈಕಮಾಂಡ್ ಮೇಲೆ ಒತ್ತಡ ಹಾಕುತ್ತಲೇ ಇದ್ದಾರೆ. ಇತ್ತ ಸಿದ್ದರಾಮಯ್ಯ ಟೀಂ ದೆಹಲಿಯಲ್ಲಿ ಮೂಲ ಕಾಂಗ್ರೆಸ್ಸಿಗರಿಗೆ ಟಾಂಗ್ ಕೋಡೋಕೆ ಕೆಲಸ ಮಾಡುತ್ತಿದೆ.

ವಿಪಕ್ಷ ನಾಯಕನ ಸ್ಥಾನ ಮತ್ತು ಶಾಸಕಾಂಗ ನಾಯಕರ ಸ್ಥಾನ ಪ್ರತ್ಯೇಕವಾಗಿ ಇರಲಿ ಅಂತ ಮೂಲಕ ಕಾಂಗ್ರೆಸ್ ನಾಯಕರು ಹೈಕಮಾಂಡ್ ಮೇಲೆ ಒತ್ತಡ ತರುತ್ತಿದ್ದಾರೆ. ಹೀಗಿರುವಾಗಲೇ ಮೂಲ ಕಾಂಗ್ರೆಸ್ ನಾಯಕರ ತಂತ್ರಕ್ಕೆ ಸಿದ್ದರಾಮಯ್ಯ ಪ್ರತಿತಂತ್ರ ಹೂಡಿ ದಾಳಿ ಉದುರಿಸಲು ಮುಂದಾಗಿದ್ದಾರೆ. ವಿಪಕ್ಷ ಸ್ಥಾನ ಮತ್ತು ಶಾಸಕಾಂಗ ನಾಯಕನ ಸ್ಥಾನ ಒಬ್ಬರ ಬಳಿಯೇ ಇರಲಿ ಅಂತ ಹೈಕಮಾಂಡ್ ಮೇಲೆ ಒತ್ತಡ ತರಲು ಸಿದ್ದರಾಮಯ್ಯ ತೀರ್ಮಾನ ಮಾಡಿದ್ದಾರೆ.

ಬಹುತೇಕ ವಿಪಕ್ಷ ಸ್ಥಾನದಲ್ಲಿ ಸಿದ್ದರಾಮಯ್ಯ ಮುಂದುವರಿಯುತ್ತಾರೆ. ಹೀಗಾಗಿ ಕೇವಲ ಒಂದು ಸ್ಥಾನದಲ್ಲಿ ಮುಂದುವರಿದರೆ ಸಾಲದು. ಶಾಸಕಾಂಗ ನಾಯಕನೂ ನಾನೇ ಆಗಬೇಕು ಎನ್ನುವ ಆಸೆಯಲ್ಲಿ ಸಿದ್ದರಾಮಯ್ಯ ಇದ್ದಾರೆ. ಹೀಗಾಗಿ ಜನವರಿಯಲ್ಲಿ ಹೈಕಮಾಂಡ್ ಭೇಟಿಯಾಗಲಿರುವ ಸಿದ್ದರಾಮಯ್ಯ, ಎರಡು ಹುದ್ದೆ ಒಬ್ಬರ ಬಳಿಯೇ ಇರಲಿ ಅಂತ ಒತ್ತಡ ಹಾಕಲು ನಿರ್ಧಾರ ಮಾಡಿದ್ದಾರೆ. ಈ ಮೂಲಕ ಮೂಲ ಕಾಂಗ್ರೆಸ್ಸಿಗರ ಪ್ಲ್ಯಾನ್‍ಗೆ ಮಾಸ್ಟರ್ ಪ್ಲ್ಯಾನ್ ಮೂಲಕ ತಿರುಗೇಟು ಕೊಡಲು ಮುಂದಾಗಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಯಾರ ಮಾತಿಗೆ ಮನ್ನಣೆ ಕೊಡುತ್ತದೆ ಎನ್ನುವುದು ಜನವರಿಯಲ್ಲಿ ಗೊತ್ತಾಗಲಿದೆ.

Comments

Leave a Reply

Your email address will not be published. Required fields are marked *