ಕೆಆರ್‌ಪೇಟೆಯಲ್ಲಿ ಕಾಮಾಟಿಪುರ ಕಿಚ್ಚು – ಡಿ.ಸಿ ತಮ್ಮಣ್ಣ ವಿರುದ್ಧ ಸಿಡಿದೆದ್ದ ಮುಂಬೈ ಜನ

ಮಂಡ್ಯ: ಕೆ.ಆರ್ ಪೇಟೆ ಚುನಾವಣಾ ಕಾವು ರಂಗೇರುತ್ತಿದೆ. ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದು, ಮೂರು ಪಕ್ಷಗಳು ಸರ್ಕಸ್ ಮಾಡುತ್ತಿವೆ. ಈ ನಡುವೆ ಮೂರು ಪಕ್ಷದ ಅಭ್ಯರ್ಥಿಗಳು ಒಬ್ಬರ ಮೇಲೊಬ್ಬರು ಕೆಸರೆರಚಿಕೊಳ್ಳುತ್ತಿದ್ದಾರೆ. ಪರಸ್ಪರ ಮಾತಿನ ಚಾಟಿ ಬೀಸೋ ಭರದಲ್ಲಿ ರೆಡ್‍ಲೈಟ್ ಏರಿಯಾದ ಪ್ರಸ್ತಾಪ ಕೆಆರ್‌ಪೇಟೆ ಉಪಕಣದಲ್ಲಿ ಕಿಡಿ ಹತ್ತಿಸಿದೆ.

ಹೌದು. ಕೆಆರ್‍ಪೇಟೆಯ ಕಿಕ್ಕೇರಿಯಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾಜಿ ಸಚಿವ ಡಿ.ಸಿ ತಮ್ಮಣ್ಣ ಬಿಜೆಪಿ ಅಭ್ಯರ್ಥಿ ವಿರುದ್ಧ ವಾಗ್ದಾಳಿ ಮಾಡೋ ಭರದಲ್ಲಿ ರೆಡ್‍ಲೈಟ್ ಏರಿಯಾದ ಪ್ರಸ್ತಾಪ ಮಾಡಿದ್ದಾರೆ. ನಾರಾಯಣಗೌಡ್ರನ್ನು ಒಂದು ವೇಳೆ ಗೆಲ್ಲಿಸಿದ್ರೆ, ಕೆಆರ್‌ಪೇಟೆಯನ್ನ ಮುಂಬೈಯ ರೆಡ್‍ಲೈಟ್ ಏರಿಯಾ ಕಾಮಾಟಿಪುರವನ್ನಾಗಿ ಮಾಡುತ್ತಾರೆ ಅಂತ ಕಿಡಿ ಹೊತ್ತಿಸಿದ್ದಾರೆ.

ಡಿ.ಸಿ ತಮ್ಮಣ್ಣರ ಈ ವಿವಾದಾತ್ಮಕ ಹೇಳಿಕೆಯಿಂದ ಆಕ್ರೋಶಗೊಂಡಿರುವ ಮುಂಬೈನಲ್ಲಿ ವಾಸವಿರುವ ಕೆಆರ್‌ಪೇಟೆ ಜನ, ಇದೀಗ ಉಪಕಣಕ್ಕೆ ಎಂಟ್ರಿ ಕೊಡೋಕೆ ರೆಡಿಯಾಗಿದ್ದಾರೆ. ಅಲ್ಲದೇ ನಾರಾಯಣಗೌಡರ ಪರ ನಿಂತು ತೊಡೆ ತಟ್ಟೋಕೆ ನಿರ್ಧರಿಸಿದ್ದಾರೆ. ತಮ್ಮಣ್ಣ ಕೆಆರ್‌ಪೇಟೆಯನ್ನ ಕಾಮಾಟಿಪುರಕ್ಕೆ ಹೋಲಿಸಿದ್ದು ಖಂಡನೀಯ. ನಮ್ಮ ಹೆಣ್ಣು ಮಕ್ಕಳು ಇದರಿಂದ ಬೇಸರಗೊಂಡಿದ್ದಾರೆ. ಹೀಗಾಗಿ ತಮ್ಮಣ್ಣ ಹೇಳಿಕೆ ಖಂಡಿಸಿ ಮುಂಬೈನಿಂದ 4-5 ಸಾವಿರ ಜನ ತಮ್ಮ ಸ್ವಂತ ಖರ್ಚಿನಿಂದ ಕೆಆರ್‌ಪೇಟೆಗೆ ಬಂದು ನಾರಾಯಣಗೌಡರ ಪರವಾಗಿ ಮತ ಹಾಕುತ್ತೇವೆ ಎಂದು ಸವಾಲು ಹಾಕಿದ್ದಾರೆ.

ಒಟ್ಟಾರೆ ಡಿಸಿ ತಮ್ಮಣ್ಣ ಕೆಆರ್‌ಪೇಟೆಯಲ್ಲಿ ಹಚ್ಚಿದ ಕಾಮಾಟಿಪುರದ ಕಿಚ್ಚು ಮುಂಬೈವರೆಗೂ ವ್ಯಾಪಿಸಿದೆ. ಈ ಕಿಚ್ಚು ಎಷ್ಟರ ಮಟ್ಟಿಗೆ ಮತವಾಗಿ ರೂಪುಗೊಳುತ್ತದೆ ಎಂದು ಕಾದುನೋಡಬೇಕಿದೆ.

Comments

Leave a Reply

Your email address will not be published. Required fields are marked *