ಇಂದಿನ ಮತದಾನದ ಮೇಲೆ ನಿಂತಿದೆ ಸರ್ಕಾರದ ಭವಿಷ್ಯ- 3 ಪಕ್ಷಗಳ ಲೆಕ್ಕಾಚಾರವೇನು?

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿರುವ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಇಂದು ಮತದಾನ ನಡೆಯಲಿದೆ. ಇಂದು ಮತದಾರ ಪ್ರಭು ಬರೆಯುವ ಹಣೆಬರಹದ ಮೇಲೆ ಬಿಜೆಪಿ ಸರ್ಕಾರದ ಭವಿಷ್ಯ ನಿಂತಿದೆ. ಬಿಜೆಪಿ ಅತಿ ಹೆಚ್ಚು ಸ್ಥಾನ ಪಡೆದು ಸರ್ಕಾರ ಉಳಿಸಿಕೊಳ್ಳುವ ಆಸೆಯಲ್ಲಿದೆ.

ಇದೇ ಕಾರಣಕ್ಕೆ ಸಿಎಂ ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದಾರೆ. 8ಕ್ಕಿಂತ ಹೆಚ್ಚು ಸ್ಥಾನ ಗೆದ್ದರೆ ಸರ್ಕಾರ ಭದ್ರ ಮತ್ತು ಮೂರುವರೆ ವರ್ಷಗಳ ಕಾಲ ಸ್ಥಿರವಾಗುವ ವಿಶ್ವಾಸವನ್ನು ಬಿಜೆಪಿ ಹೊಂದಿದೆ. 6ಕ್ಕಿಂತ ಕಡಿಮೆ ಸ್ಥಾನಕ್ಕೆ ಕುಸಿದ್ರೂ ಸದ್ಯಕ್ಕೆ ಸೇಫ್ ಆಗಿರಬಹುದು. ಮುಂಬರುವ ರಾಜರಾಜೇಶ್ವರಿನಗರ, ಮಸ್ಕಿ ಕ್ಷೇತ್ರಗಳಲ್ಲಿ ಗೆಲ್ಲಲು ಸಿದ್ಧತೆ ನಡೆಸಿಕೊಳ್ಳುವುದು.

ಇತ್ತ ಅನರ್ಹರನ್ನು ಸೋಲಿಸಿ ಸರ್ಕಾರ ಬೀಳಿಸಬೇಕೆಂದು ಕಾಂಗ್ರೆಸ್ ಪಣ ತೊಟ್ಟಿದೆ. ಅದಕ್ಕಾಗಿ ಕೈ ಪಕ್ಷದ ಮುಖಂಡರು ಭರ್ಜರಿ ಪ್ರಚಾರ ಕೂಡ ಮಾಡಿದರು. ಬಿಜೆಪಿ 6ಕ್ಕಿಂತ ಕಡಿಮೆ ಸ್ಥಾನ ಬಂದ್ರೆ ಸರ್ಕಾರ ರಚಿಸಲು ಪ್ಲಾನ್ ಮಾಡಿಕೊಳ್ಳುವುದು. ಮೈತ್ರಿಗೆ ಬೆಂಬಲ ನೀಡುವಂತೆ ಪಕ್ಷೇತರ ಶಾಸಕ ನಾಗೇಶ್ ಮತ್ತು ಬಿಎಸ್‍ಪಿಯ ಮಹೇಶ್ ಸೆಳೆಯುವುದು. ಕಾಂಗ್ರೆಸ್‍ನ ಪ್ಲಾನ್ ಯಶಸ್ಸು ಏನಿದ್ರೂ ಬಿಜೆಪಿ ಸೋಲಿನಲ್ಲಿ ಇದೆ.

ಚುನಾವಣಾ ಪ್ರಚಾರದಲ್ಲಿ ಮೈತ್ರಿಯ ಬಗ್ಗೆ ಗೊಂದಲದಲ್ಲೇ ಮಾತನಾಡಿರುವ ಹೆಚ್.ಡಿ.ಕುಮಾರಸ್ವಾಮಿ ಫಲಿತಾಂಶದ ಬಳಿಕ ಏನು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದಕ್ಕೆ ಯಾವುದೇ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಬಿಜೆಪಿ 5ಕ್ಕಿಂತ ಕಡಿಮೆ ಸ್ಥಾನ ಬಂದರೆ ಮೈತ್ರಿಗೆ ಓಪನ್ ಅಪ್ ಆಗುವುದು. ಪರಿಸ್ಥಿತಿ ನೋಡಿಕೊಂಡು ಯಾರ ಜತೆ ಮೈತ್ರಿ ಅನ್ನೋದನ್ನ ತೀರ್ಮಾನಿಸುವುದು. ಸಿದ್ದರಾಮಯ್ಯರನ್ನ ದೂರ ಇಟ್ಟು ಸರ್ಕಾರ ರಚನೆಗೆ ಪ್ಲಾನ್ ಮಾಡಲಾಗುತ್ತಿದೆ ಎನ್ನಲಾಗಿದೆ.

ಜೆಡಿಎಸ್ ಪ್ಲಾನ್ ಯಶಸ್ವಿಗೂ ಬಿಜೆಪಿ ಸೋಲಲೇ ಬೇಕಿದೆ. ಆದ್ರೆ ಸದ್ಯಕ್ಕೆ ಈ ಮೈತ್ರಿ ಯಶಸ್ಸು ತುಂಬಾ ದೂರದ ಮಾತು ಎಂಬ ಮಾತು ಜೆಡಿಎಸ್ ಅಂಗಳದಲ್ಲಿ ಕೇಳಿ ಬರುತ್ತಿದೆ. ಹಾಗಾಗಿ ಆತುರಪಡದೇ ಕಾದು ನೋಡಿ ಮೈತ್ರಿ ದಾಳ ಉರುಳಿಸಲು ಜೆಡಿಎಸ್ ಚಿಂತನೆ ನಡೆಸಿದೆ. ಒಟ್ಟಾರೆ ಈಗಾಗಲೇ ಮೂರು ಪಕ್ಷಗಳು ರಿಸಲ್ಟ್ ಬಳಿಕ ಏನು ಮಾಡಬಹುದು ಎಂಬ ಲೆಕ್ಕಾಚಾರ ಮಾಡಿಕೊಂಡಿವೆ. ಆದ್ರೆ ಅಂತಿಮವಾಗಿ ಮತದಾರರ ಒಲವು ಯಾರ ಕಡೆ ಇದೆ ಎಂಬುವುದು ಬಹಿರಂಗವಾಗುವುದಕ್ಕೆ ಡಿಸೆಂಬರ್ 9 ರವರೆಗೆ ಕಾಯಲೇಬೇಕಿದೆ.

Comments

Leave a Reply

Your email address will not be published. Required fields are marked *