ಕಾಶಿ ಯಾತ್ರೆ ಕೈಗೊಳ್ಳುವವರಿಗೆ 5 ಸಾವಿರ ರೂ.ಸಹಾಯಧನ

ಬೆಂಗಳೂರು: ಪ್ರಗತಿಯ ಮುನ್ನೋಟ ಎಂದೇ ಪರಿಗಣಿಸಲ್ಪಡುವ ರಾಜ್ಯ ಬಜೆಟ್ ಮಂಡನೆ ಆಗಿದೆ. ಮುಖ್ಯಮಂತ್ರಿ ಮೊದಲ ಬಾರಿಗೆ ಅಯವ್ಯಯ ಮಂಡಿಸಿದ್ದಾರೆ. ವಿತ್ತೀಯ ಕೊರತೆ ನಡುವೆಯೂ ಬೊಮ್ಮಾಯಿ ಬಜೆಟ್ ಜನಪ್ರಿಯ ಹಳಿ ಮೇಲೆಯೇ ಸಾಗಿದೆ. ಇದಕ್ಕೆ ಪ್ರಮುಖ ಕಾರಣ ವರ್ಷದೊಪ್ಪತ್ತಿನಲ್ಲಿ ಎದುರಾಗಲಿರುವ ವಿಧಾನಸಭೆ ಚುನಾವಣೆ ಎಂದರೇ ತಪ್ಪಾಗಲಿಕ್ಕಿಲ್ಲ. ಯಾವುದೇ ತೆರಿಗೆ ಭಾರ ಹೇರದೇ, ಹಲವು ಜನಪರ ನಿಲುವುಗಳನ್ನು ಕೈಗೊಳ್ಳಲಾಗಿದೆ.

ಮಹತ್ವದ್ದು ಎನಿಸುವ ಯಾವುದೇ ದೊಡ್ಡ ಘೋಷಣೆಗಳು ಹೊರಹೊಮ್ಮಿಲ್ಲ. ಆದರೆ ಬಹುಸಂಖ್ಯಾತ ಹಿಂದೂಗಳ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಹಲವು ಘೋಷಣೆಗಳನ್ನು ಬಜೆಟ್ ಮೂಲಕ ಬೊಮ್ಮಾಯಿ ಪ್ರಕಟಿಸಿದ್ದಾರೆ. 2,61,977 ಕೋಟಿ ರೂ.ಆದಾಯನ್ನು ನಿರೀಕ್ಷಿಸಿದ್ದು, ಬಜೆಟ್‌ನಲ್ಲಿ ವಿವಿಧ ಯೋಜನೆಗಳಿಗೆ 2,65,720 ಕೋಟಿ ರೂ. ವೆಚ್ಚ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 1 ರೂ. ಬಂದಿದ್ದು ಹೇಗೆ? ಹೋಗಿದ್ದು ಹೇಗೆ? – ಯಾವ ವಲಯಕ್ಕೆ ಎಷ್ಟು ಕೋಟಿ?

 

ಬಹುಸಂಖ್ಯಾತ ಹಿಂದೂಗಳ ಪ್ರಮುಖ ಬೇಡಿಕೆಯಾದ, ಮುಜುರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಿಗೆ ಸ್ವಾಯತ್ತತೆ ನೀಡುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್ ಮೂಲಕ ಅಧಿಕೃತ ಘೋಷಣೆ ಮಾಡಿದ್ದಾರೆ. ದೇಗುಲಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತ ಮಾಡುವಂತೆ ಭಕ್ತರು ಇಟ್ಟಿದ್ದ ಬೇಡಿಕೆಯನ್ನು ಈಡೇರಿಸಲಾಗುತ್ತಿದೆ ಎಂದು ಸಿಎಂ ಪ್ರಕಟಿಸಿದರು. ಇದನ್ನೂ ಓದಿ: ಒಲಿಂಪಿಕ್ಸ್‌ಗೆ ಸಿದ್ಧತೆ – 75 ಕ್ರೀಡಾಪಟುಗಳಿಗೆ ತಲಾ 10 ಲಕ್ಷ

ಪ್ರಮುಖ ಧಾರ್ಮಿಕ ಘೋಷಣೆಗಳು
* ಮುಜುರಾಯಿ ಇಲಾಖೆಯ ದೇಗುಲಗಳಿಗೆ ಸ್ವಾಯತ್ತತೆ
* ದೇವಾಲಯಗಳ ಅಭಿವೃದ್ಧಿಗೆ 158 ಕೋಟಿ ರೂ. ಅನುದಾನ
* ಅರ್ಚಕರು, ಆಗಮಿಕರು, ನೌಕರರ ತಸ್ತಿಕ್ ಹಣ ಹೆಚ್ಚಳ- 48ರಿಂದ 60 ಸಾವಿರಕ್ಕೆ ಹೆಚ್ಚಳ
* ಗೋವುಗಳನ್ನು ದತ್ತು ತೆಗೆದುಕೊಳ್ಳಲು ಪುಣ್ಯಕೋಟಿ ಯೋಜನೆ
* ಕಾಶಿ ಯಾತ್ರೆ ಕೈಗೊಳ್ಳುವ 30 ಸಾವಿರ ಮಂದಿಗೆ 5 ಸಾವಿರ ರೂ.ಸಹಾಯಧನ
* 100 ಕೋಟಿ ವೆಚ್ಚದಲ್ಲಿ ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿ
* ಚಾಮುಂಡಿ ಬೆಟ್ಟ, ದತ್ತಪೀಠದಲ್ಲಿ ರೋಪ್‍ವೇ ನಿರ್ಮಾಣ ಪ್ರಸ್ತಾವನೆ
* ಆಂಧ್ರದ ಶ್ರೀಶೈಲಂನಲ್ಲಿ ಕರ್ನಾಟಕ ಯಾತ್ರಿ ನಿವಾಸ ನಿರ್ಮಾಣ
* ಕುಕ್ಕೆ, ಧರ್ಮಸ್ಥಳ, ಮಂತ್ರಾಲಯ, ತಿರುಪತಿಗೆ ಪ್ಯಾಕೇಜ್ ಟ್ರಿಪ್

ಪ್ರಮುಖ ಸಮುದಾಯಗಳಿಗೆ ಕೋಟಿ ಕೋಟಿ ಹಣ
* ದೇವರಾಜ ಅರಸು ಅಭಿವೃದ್ಧಿ ನಿಗಮಕ್ಕೆ 400 ಕೋಟಿ ರೂ.
* ಇತರ ಹಿಂದುಳಿದ ಸಮುದಾಯಗಳಿಗೆ 400 ಕೋಟಿ ರೂ.
* ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ರೂ.
* ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ರೂ.
* ಮರಾಠಾ ಅಭಿವೃದ್ಧಿ ನಿಗಮಕ್ಕೆ 50 ಕೋಟಿ ರೂ.
* ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ 50 ಕೋಟಿ ರೂ.
* ಜೈನ, ಸಿಖ್ ಮತ್ತು ಬೌದ್ಧ ಸಮುದಾಯಗಳ ಅಭಿವೃದ್ಧಿಗೆ 50 ಕೋಟಿ ರೂ.

Comments

Leave a Reply

Your email address will not be published. Required fields are marked *