ಕರ್ನಾಟಕ, ತೆಲಂಗಾಣ ಸರ್ಕಾರದಿಂದ ಅದ್ಧೂರಿಯಾಗಿ ನಡೆಯಿತು ಪ್ರೇಮಿಗಳ ಮದುವೆ!

ಕೊಪ್ಪಳ: ಜಿಲ್ಲೆಯ ಗಂಗಾವತಿಯ ವಿದ್ಯಾನಗರದಲ್ಲಿ ಪೊಲೀಸರ ಸರ್ಪಗಾವಲಿನಲ್ಲಿ ತೆಲಂಗಾಣ ಮತ್ತು ಕರ್ನಾಟಕ ಸರ್ಕಾರದ ವತಿಯಿಂದ ಪ್ರೇಮಿಗಳ ಮದುವೆಯೊಂದು ಅದ್ಧೂರಿಯಾಗಿ ನೆರವೇರಿದೆ.

ಪ್ರೇಮ ವಿವಾಹಕ್ಕೆ ವಿರೋಧ ಪಡಿಸಿದ್ದ ಪೋಷಕರ ನಿರ್ಧಾರನ್ನು ಖಂಡಿಸಿ, ಪೊಲೀಸರ ಸಮ್ಮುಖದಲ್ಲೇ ಪ್ರೇಮಿಗಳು ವಿವಾಹವಾಗಿದ್ದಾರೆ. ಗಂಗಾವತಿಯ ಸಿದ್ದಾಪುರ ಗ್ರಾಮದ ಯುವತಿ ನಿರಂಜನಿ, ಉಳೇನೂರು ಗ್ರಾಮದ ಯುವಕ ವೆಂಕಟ್ ಭಾರ್ಗವರನ್ನು ಕಳೆದ 8 ವರ್ಷಗಳಿಂದ ಪ್ರೀತಿಸುತ್ತಿದ್ದರು. ವೆಂಕಟ್ ಸೆವೆನ್ ಸ್ಟಾರ್ ಹೋಟೆಲ್ಲಿನ ಶೆಫ್ ಆಗಿದ್ದರೆ ನಿರಂಜನಿ ಬೆಂಗಳೂರಿನ ಅಮೆರಿಕನ್ ವೇಲ್ಸ್ ಫಾರ್ ಗೋ ಬ್ಯಾಂಕ್ ಉದ್ಯೋಗಿಯಾಗಿದ್ದರು.

ಇತ್ತೀಚೆಗೆ ಇವರಿಬ್ಬರ ಪ್ರೀತಿಯ ವಿಷಯ ಯುವತಿಯ ಮನೆಯವರಿಗೆ ಗೊತ್ತಾಗಿತ್ತು. ಅಲ್ಲದೇ ನಿರಂಜನಿ ಕುಟುಂಬದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಇಬ್ಬರೂ ಸಂಬಂಧಿಕರಾದರೂ ಮದುವೆಗೆ ಪೋಷಕರು ವಿರೋಧ ವ್ಯಕ್ತಪಡಿಸಿ, ವೆಂಕಟ್ ಕೈ ಬಿಡುವಂತೆ ಯುವತಿಗೆ ಕಿರುಕುಳ ನೀಡಿದ್ದರು. ಮನೆಯವರ ಕಿರುಕುಳದಿಂದ ಬೇಸತ್ತ ಈ ಜೋಡಿ ಆಲ್ ಇಂಡಿಯಾ ಡೆಮೆಕ್ರಾಟಿಕ್ ಅಸೋಸಿಯೇಷನ್ ಮೊರೆ ಹೋಗಿದ್ದರು. ಈ ಬಗ್ಗೆ ಅಸೋಸಿಯೇಷನ್ ತೆಲಂಗಾಣ ರಾಜ್ಯಪಾಲರಿಗೆ ಪತ್ರ ಬರೆದಿತ್ತು.

ನಂತರ ತೆಲಂಗಾಣ ರಾಜ್ಯಪಾಲರು ಕರ್ನಾಟಕ ಪೊಲೀಸ್ ಮಹಾನಿರ್ದೇಶಕರಿಗೆ ಇಬ್ಬರ ಮದುವೆ ಮಾಡಿಸುವಂತೆ ಆದೇಶ ರವಾನಿಸಿದ್ದರು. ಇದರಿಂದ ಎಚ್ಚೆತ್ತ ಪೊಲೀಸರು ಗಂಗಾವತಿಯ ಶ್ರೀರಾಮ ಮಂದಿರದಲ್ಲಿ ಪ್ರೇಮಿಗಳ ವಿವಾಹವನ್ನು ನೆರವೇರಿಸಿಕೊಟ್ಟಿದ್ದಾರೆ. ಅಲ್ಲದೇ ಈ ಮದುವೆಗೆ ಕರ್ನಾಟಕ ಹಾಗೂ ತೆಲಂಗಾಣ ಸರ್ಕಾರಗಳು ಬೆಂಬಲ ಸೂಚಿಸಿದ್ದು ವಿಶೇಷವಾಗಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *