ಬೆಂಗಳೂರು, ಮಂಗಳೂರು, ಬಾಗಲಕೋಟೆಯ ವಿದ್ಯಾರ್ಥಿಗಳಿಗೆ ಔಟ್ ಆಫ್ ಔಟ್

ಬೆಂಗಳೂರು: ಈ ಬಾರಿಯ ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಮೂವರು ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ತೆಗೆಯುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಎಂಇಎಸ್ ಕಿಶೋರ ಕೇಂದ್ರ ಹೈಸ್ಕೂಲಿನ ಸುಮಂತ್ ಹೆಗ್ಡೆ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಡಬದ ಸೈಂಟ್ ಜೋಕಿಮ್ಸ್ ಹೈ ಸ್ಕೂಲಿನ  ಪೂರ್ಣಾನಂದ, ಬಾಗಲಕೋಟೆಯ ಜಮಖಂಡಿಯ ಎಸ್‍ಆರ್‍ಎ ಶಾಲೆಯ ಪಲ್ಲವಿ 625 ಅಂಕಗಳಿಸಿದ್ದಾರೆ.

ಈ ಬಾರಿ ಒಟ್ಟು 5,81,134 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ.67.87 ಫಲಿತಾಂಶ ದಾಖಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.7.24 ರಷ್ಟು ಫಲಿತಾಂಶ ಇಳಿಕೆಯಾಗಿದ್ದು ಕಳೆದ 6 ವರ್ಷದಲ್ಲೇ ಕಳಪೆ ಫಲಿತಾಂಶ ದಾಖಲಾಗಿದೆ.

ಪಿಯುಸಿ ಫಲಿತಾಂಶದಂತೆ ಎಸ್‍ಎಸ್‍ಎಲ್‍ಸಿಯಯಲ್ಲೂ ಉಡುಪಿ ಮತ್ತು ದಕ್ಷಿಣ ಕನ್ನಡ ಅನುಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಪಡೆದಿದೆ. ಚಿಕ್ಕೋಡಿ ಮೂರನೇ ಸ್ಥಾನವನ್ನು ಪಡೆದರೆ ಬೀದರ್ ಕೊನೆಯ ಸ್ಥಾನವನ್ನು ಪಡೆದಿದೆ.

ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದು 2,96,426 ಮಂದಿ ವಿದ್ಯಾರ್ಥಿನಿಯರು ತೇರ್ಗಡೆಯಗಿದ್ದರೆ, 2,84,708 ವಿದ್ಯಾರ್ಥಿಗಳು ತೇಗಡೆಯಾಗಿದ್ದಾರೆ. 924 ಶಾಲೆಗಳಲ್ಲಿ ಶೇ.100 ಫಲಿತಾಂಶ ದಾಖಲಾಗಿದ್ದು, 60 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ದಾಖಲಾಗಿದೆ. ಶೂನ್ಯ ಫಲಿತಾಂಶ ದಾಖಲಾದ ಶಾಲೆಗಳಲ್ಲಿ 51 ಖಾಸಗಿ ಶಾಲೆಗಳು ಸೇರಿವೆ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಭಾಗದ 3,17,570( ಶೇ.74.12) ವಿದ್ಯಾರ್ಥಿಗಳು ಪಾಸಾಗಿದ್ದರೆ, ನಗರ ಪ್ರದೇಶದ 2,42,869( ಶೇ.72.18) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

36,138 ವಿದ್ಯಾರ್ಥಿಗಳು ಎ+ ಶ್ರೇಣಿ ಪಡೆದರೆ, 93,332 ವಿದ್ಯಾರ್ಥಿಗಳು ಎ ಶ್ರೇಣಿ ಪಡೆದಿದ್ದಾರೆ. ಮೂವರು ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳಿಸಿದ್ದಾರೆ.

ಪೂರಕ ಪರೀಕ್ಷೆ-ಜೂನ್ 15 ರಿಂದ 22ರವರೆಗೆ ನಡೆಯಲಿದ್ದು, ಮರು ಏಣಿಕೆ ಮತ್ತು ಉತ್ತರ ಪತ್ರಿಕೆ ಪ್ರತಿಗೆ ಅರ್ಜಿ ಸಲ್ಲಿಸಲು ಮೇ 22 ಕೊನೆ ದಿನಾಂಕವಾಗಿದೆ.

ಎಸ್‍ಎಸ್‍ಎಲ್‍ಸಿ ಟಾಪರ್ ಬೆಂಗಳೂರಿನ ಸುಮಂತ್ ಹೆಗ್ಡೆಗೆ ತಾಯಿ ಚೇತನಾ ಅವರು ಸಿಹಿ ತಿನ್ನಿಸುತ್ತಿರುವುದು

 

Comments

Leave a Reply

Your email address will not be published. Required fields are marked *