ಕರವೇ ಜಿಲ್ಲಾಧ್ಯಕ್ಷನ ಕಿರುಕುಳ ಆರೋಪ- ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಆಟೋ ಚಾಲಕ

ಶಿವಮೊಗ್ಗ: ಪ್ರವೀಣ್ ಶೆಟ್ಟಿ ಬಣದ ಕರವೇ ಜಿಲ್ಲಾಧ್ಯಕ್ಷ ಮಂಜುನಾಥ್ ಕೊಟ್ಯಾನ್ ಕಿರುಕುಳಕ್ಕೆ ಬೇಸತ್ತು ಆಟೋ ಚಾಲಕರೊಬ್ಬರು ಸೆಲ್ಫಿ ವಿಡಿಯೋ ಮಾಡಿ, ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಯತ್ನಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಟಿಪ್ಪುನಗರದ ಆಟೋ ಚಾಲಕ ನೂರುಲ್ಲಾ ಆತ್ಮಹತ್ಯೆಗೆ ಯತ್ನಿಸಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರವೇ ಜಿಲ್ಲಾಧ್ಯಕ್ಷ ಮಂಜುನಾಥ ಕೊಟ್ಯಾನ್ ಹಾಗೂ ಶಬ್ಬೀರ್ ಎಂಬವರು ಕಿರುಕುಳ ನೀಡಿದ್ದಾರೆ ಎಂದು ಸೆಲ್ಫಿ ವಿಡಿಯೋದಲ್ಲಿ ನೂರುಲ್ಲಾ ಹೇಳಿದ್ದಾರೆ. ಪ್ರವೀಣ್ ಶೆಟ್ಟಿ ಬಣದ ಮಂಜುನಾಥ್ ಅವರೊಂದಿಗೆ ನೂರುಲ್ಲಾ ಗುರುತಿಸಿಕೊಂಡಿದ್ದರು. ಆ ವೇಳೆ ಕರವೇಯಿಂದ ರಾಜ್ಯೋತ್ಸವಕ್ಕಾಗಿ ಒಂದೂವರೆ ಲಕ್ಷ ರೂಪಾಯಿ ಸಂಗ್ರಹ ಮಾಡಲಾಗಿತ್ತು. ಹಣ ಸಂಗ್ರಹವಾದರೂ ನಗರದಲ್ಲಿ ರಾಜ್ಯೋತ್ಸವ ಆಚರಿಸಿರಲಿಲ್ಲ. ಇದರಿಂದ ಬೇಸರಗೊಂಡ ನೂರುಲ್ಲಾ ಪ್ರವೀಣ್ ಶೆಟ್ಟಿ ಬಣ ತೊರೆದು ನಾರಾಯಾಣ ಗೌಡರ ಬಣಕ್ಕೆ ಸೇರ್ಪಡೆಯಾಗಿದ್ದರು.

ಪ್ರವೀಣ ಶೆಟ್ಟಿ ಬಣದಲ್ಲಿ ಗುರುತಿಸಿಕೊಂಡಿದ್ದಾಗ ನೂರುಲ್ಲಾ ಆಟೋ ಖರೀದಿಗಾಗಿ ಮಂಜುನಾಥ್ ಕೊಟ್ಯಾನ್ ಬಳಿ 15 ಸಾವಿರ ರೂ. ಸಾಲ ಮಾಡಿಕೊಂಡಿದ್ದರು. ಪ್ರವೀಣ್ ಶೆಟ್ಟಿ ಬಣ ತೊರೆದ ಮೇಲೆ ಮಂಜುನಾಥ್ 15 ಸಾವಿರ ರೂ.ಗೆ 20 ಸಾವಿರ ರೂ. ಸೇರಿಸಿ ನೀಡುವಂತೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಇದರಿಂದ ಬೇಸರಗೊಂಡ ನೂರುಲ್ಲಾ ಇಂದು ಬೆಳಗ್ಗೆ ಸೆಲ್ಫಿ ವಿಡಿಯೋ ಮಾಡಿ ಹಾಗೂ ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿದ್ದಾರೆ. ತುಂಗಾನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Comments

Leave a Reply

Your email address will not be published. Required fields are marked *