ಅನೇಕ ಭಯಾನಕ ಘಟನೆಗಳ ನಡುವೆಯೂ ಬಿಡುಗಡೆಗೆ ಸಿದ್ಧವಾದ `ಕೆಲವು ದಿನಗಳ ನಂತರ’

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಅನೇಕ ಹಾರರ್ ಸಿನಿಮಾಗಳು ಬಿಡುಗಡೆಗೊಂಡಿದ್ದು, ಹವಾ ಸೃಷ್ಟಿಸಿವೆ. ಈಗ ಈ ಸಾಲಿಗೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್ ಸೇರಿದಂತೆ ಅನೇಕ ಕಲಾವಿದರು ಮಾಡಿರುವ `ಕೆಲವು ದಿನಗಳ ನಂತರ’ ಸಿನಿಮಾ ಕೂಡ ಸೇರಿಕೊಂಡಿದೆ.

ಕೆಲವು ದಿನಗಳ ನಂತರ ಸಿನಿಮಾದ ಚಿತ್ರತಂಡ ಚಿತ್ರದ ಟೀಸರ್ ಬಿಡುಗಡೆ ಮಾಡಿತ್ತು. ಟೀಸರ್ ಸಾಕಷ್ಟು ಭರವಸೆಯನ್ನು ಮೂಡಿಸಿದ್ದು, ಟೀಸರ್ ನಲ್ಲಿ ಸೌಂಡ್ ಎಫೆಕ್ಟ್ ಉತ್ತವಾಗಿತ್ತು.  ಕೆಲವು ದಿನಗಳ ನಂತರ ಚಿತ್ರತಂಡ ಸಾಕಷ್ಟು ಹಾಸ್ಯ ಕಲಾವಿದರನ್ನು ಮತ್ತು ಯುವ ಪ್ರತಿಭೆಗಳನ್ನು ಒಳಗೊಂಡಿದೆ. ಅಷ್ಟೇ ಅಲ್ಲದೇ ಈ ಸಿನಿಮಾದ ವಿಶೇಷತೆ ಎಂದರೆ 6 ತಿಂಗಳ ಮಗುವನ್ನು ಕಂಪ್ಯೂಟರ್ ಗ್ರಾಫಿಕ್ಸ್ ನ ಮೂಲಕ ತಯಾರಿಸಲಾಗಿದೆ.


ಶ್ರೀನಿ ರವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ಇವರು ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಅನೇಕ ಸಿನಿಮಾಗಳಿಗೆ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಅನುಭವವನ್ನು ಹೊಂದಿದ್ದಾರೆ. ಇವರು ಇದೇ ಮೊದಲ ಬಾರಿಗೆ `ಕೆಲವು ದಿನಗಳ ನಂತರ’ ಸಿನಿಮಾದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಇಂದಿನ ಯುವ ಜನತೆಯ ಸಮಸ್ಯೆಯ ಕುರಿತು `ಕೆಲವು ದಿನಗಳ ನಂತರ’ ಎಂಬ ತಯಾರಾಗಿದ್ದು, ಪ್ರೇಕ್ಷಕರಿಗೆ ಇಷ್ಟವಾಗುತ್ತದೆ.

2016ರಲ್ಲಿ ನಡೆದಿದ್ದ ಘಟನೆಯೊಂದು ರಾಜ್ಯಾದ್ಯಂತ ಸದ್ದು ಮಾಡಿತ್ತು. ಆ ನೈಜ ಘಟನೆಯನ್ನು ಆಧರಿಸಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಇದೊಂದು ಕಾಮಿಡಿ ಮತ್ತು ಸಸ್ಪೆನ್ಸ್ ಸಿನಿಮಾವಾಗಿದ್ದು, ಇಲ್ಲಿವರೆಗೂ ತೆರೆಕಂಡಿರುವ ಹಾರರ್ ಸಿನಿಮಾಗಳಿಗಿಂತ ಭಿನ್ನವಾಗಿರುತ್ತದೆ ಎಂಬ ಭರವಸೆವನ್ನು ಚಿತ್ರತಂಡ ಹೊಂದಿದೆ. ಇಂಗ್ಲಿಷ್ ಚಿತ್ರಗಳಲ್ಲಿ ಪ್ರಸಿದ್ಧಿ ಪಡೆದು ಸ್ಯಾಂಡಲ್ ವುಡ್ ಗೆ ಅಪರಿಚಿತವಾಗಿದ್ದ ಝಾಂಬೀಸ್‍ಗಳನ್ನು ಮೊದಲ ಬಾರಿಗೆ ಈ ಸಿನಿಮಾದಲ್ಲಿ ಪರಿಚಯಿಸಲಾಗಿದ್ದು, ನವೀನ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ.

`ಕೆಲವು ದಿನಗಳ ನಂತರ’ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಸಂಭವಿಸಿದ ಭಯಾನಕ ಅನಾಹುತಗಳಿಂದ ಚಿತ್ರತಂಡ ಒಂದೆರಡು ಬಾರಿ ಬೆಚ್ಚಿ ಬಿದ್ದಿರುವ ಘಟನೆಯೂ ನಡೆದಿದೆಯಂತೆ. ಒಂದು ದಿನ ದೇವರಾಯನದುರ್ಗ ಬೆಟ್ಟದ ಮೇಲೆ ಶೂಟಿಂಗ್ ನಡೆಯುತ್ತಿತ್ತು. ಆಗ ಜೀಪಿನಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್, ಶುಭಾ ಪೂಂಜಾ ಸೇರಿದಂತೆ ಹಲವಾರು ಮಂದಿ ಜೀಪಿನಲ್ಲಿದ್ದರು. ಆಗ ಜಗ್ಗು ಡ್ರೈವ್ ಮಾಡುತ್ತಿದ್ದನು. ಜೀಪ್ ರಿವರ್ಸ್ ತೆಗೆದುಕೊಳ್ಳುವ ದೃಶ್ಯದ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ ಜಗ್ಗು ರಿವರ್ಸ್ ತೆಗೆಯುವಾಗ ಜೀಪಿನ ನಿಯಂತ್ರಣ ತಪ್ಪಿ ಬೆಟ್ಟದ ತುದಿಗೆ ಹೋಗಿದ್ದು, ಪ್ರಪಾತಕ್ಕೆ ಬೀಳಬೇಕಿದ್ದ ಜೀಪು ಸಿನಿಮಾ ರೀತಿಯಲ್ಲಿ ನಿಂತಿತ್ತು. ಇದೇ ರೀತಿ ಚಿತ್ರೀಕರಣದ ವೇಳೆ ಅನೇಕ ಭಯಾನಕ ಅನುಭವಗಳು ಆಗಿವೆ ಎಂದು ಚಿತ್ರತಂಡ ಹೇಳಿದೆ.

`ಕೆಲವು ದಿನಗಳ ನಂತರ’ ಮುತ್ತುರಾಜ್ ಹೆಚ್.ಪಿ ಅವರು ನಿರ್ಮಾಣದಲ್ಲಿ ಮೂಡಿ ಬರುತ್ತಿದೆ. ಶುಭಾ ಪೂಂಜಾ, ಮಜಾ ಟಾಕೀಸ್ ಖ್ಯಾತಿಯ ಪವನ್, ಕಾಮಿಡಿ ಕಿಲಾಡಿ ಲೋಕೇಶ್, ದ್ರವ್ಯ ಶೆಟ್ಟಿ, ಜಗದೀಶ್, ಸೋನು ಪಾಟೀಲ್, ಬೇಬಿ ಶ್ರೀಲಕ್ಷ್ಮಿ, ಶ್ರೀ ಮಾರುತಿ ಮತ್ತು ಶರಣಯ್ಯ ಮುಂತಾದ ತಾರಾಬಳಗ ಈ ಸಿನಿಮಾದಲ್ಲಿ ಕಾಣಬಹುದಾಗಿದೆ. ಇಂತಹ ಅನೇಕ ಭಯಾನಕ ಅನುಭವಗಳು ಆದರೂ, ರೋಚಕವಾದ ಕಥಾ ಹಂದರ ಹೊಂದಿರುವ ಈ ಸಿನಿಮಾ ಇದೇ ತಿಂಗಳ 22ರಂದು ತೆರೆಗೆ ಬರಲಿದೆ.

Comments

Leave a Reply

Your email address will not be published. Required fields are marked *