ನಕ್ಸಲ್ ದಾಳಿ: ಲೈವ್ ವರದಿ ಬಿತ್ತರಿಸಿದ ಪತ್ರಕರ್ತ

-ಇಲ್ಲಿ ಪರಿಸ್ಥಿತಿ ಗಂಭೀರ, ನಾನು ಸಾಯಲೂಬಹುದು ಲವ್ ಯೂ ಅಮ್ಮ

ರಾಯ್ಪುರ್: ಛತ್ತೀಸಗಢ ರಾಜ್ಯದ ದಂತೇವಾಡಾ ಜಿಲ್ಲೆಯ ಅರನಪುರ ಠಾಣಾ ವ್ಯಾಪ್ತಿಯ ನೀಲವಾಯ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಚುನಾವಣಾ ಕರ್ತವ್ಯ ನಿರತ ಪೊಲೀಸರ ಮೇಲೆ ನಕ್ಸಲರು ಗುಂಡಿನ ದಾಳಿ ನಡೆಸಿದ್ದಾರೆ. ಈ ಘಟನೆ ವೇಳೆ ಸ್ಥಳದಲ್ಲಿದ್ದ ಪತ್ರಕರ್ತರು ಸಹ ನಕ್ಸಲರ ಬಲೆಗೆ ಸಿಲುಕಿಕೊಂಡಿದ್ದರು.

ಈ ಗುಂಪಿನಲ್ಲಿದ್ದ ದೂರದರ್ಶನ ವಾಹಿನಿ ಪತ್ರಕರ್ತ ಮೋರಧ್ವಜ್ ಎಂಬವರು ತಮ್ಮ ಮೊಬೈಲ್ ಮೂಲಕ ಘಟನೆಯ ಬಗ್ಗೆ ವರದಿ ಮಾಡಿ, ತಮ್ಮ ತಾಯಿಗೆ ಭಾವನಾತ್ಮಕ ಸಂದೇಶವನ್ನು ರವಾನಿಸಿದ್ದಾರೆ. ಇಲ್ಲಿಯ ಪರಿಸ್ಥಿತಿ ತುಂಬಾ ಗಂಭೀರವಾಗಿದ್ದು, ಪೊಲೀಸರನ್ನು ಮತ್ತು ನಮ್ಮನ್ನು ನಕ್ಸಲರು ಸುತ್ತುವರಿದಿದ್ದಾರೆ. ನಾನು ಬದುಕಿ ಬರುವ ಸಾಧ್ಯತೆಗಳಿಲ್ಲ. ಲವ್ ಯೂ ಅಮ್ಮಾ ಎಂದು ತಾಯಿಗೆ ಭಾವನಾತ್ಮಕ ಸಂದೇಶವನ್ನು ರವಾನಿಸಿದ್ದಾರೆ. ಸೈನಿಕರು ಪ್ರತಿದಾಳಿ ನಡೆಸಿ ನಕ್ಸಲರನ್ನು ಹಿಮ್ಮೆಟ್ಟಿಸಿದ್ದು, ಮೋರಧ್ವಜ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಿಡಿಯೋದಲ್ಲಿ ಏನಿದೆ?
ಚುನಾವಣಾ ಕಾರ್ಯ ನಿಮಿತ್ತ ದಂತೇವಾಡ ಜಿಲ್ಲೆಗೆ ನಮ್ಮನ್ನು ನೇಮಿಸಲಾಗಿತ್ತು. ಸೈನಿಕರ ಜೊತೆ ನಾವು ಹೋಗುತ್ತಿದ್ದಾಗ ನಮ್ಮನ್ನು ನಕ್ಸಲರು ಸುತ್ತುವರಿದಿದ್ದಾರೆ. ಈ ದಾಳಿಯಲ್ಲಿ ಬದುಕುತ್ತೇನೆ ಎಂಬ ಭರವಸೆ ನನಗಿಲ್ಲ. ಅಮ್ಮಾ ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ಸಾವನ್ನು ಎದುರು ನೋಡುತ್ತಿದ್ದರೂ, ಯಾಕೋ ನನಗೆ ಭಯ ಆಗುತ್ತಿಲ್ಲ. ನಮ್ಮ ಜೊತೆ ಆರೇಳು ಸೈನಿಕರಿದ್ದರೂ, ನಾಲ್ಕು ದಿಕ್ಕುಗಳಿಂದ ನಕ್ಸಲರು ನಮ್ಮನ್ನು ಸುತ್ತುವರಿದಿದ್ದಾರೆ. ಸ್ಥಳದ ಪರಿಸ್ಥಿತಿಯ ಬಗ್ಗೆ ವಿಶ್ಲೇಷಣೆ ಮಾಡಿರುವ ಮೋರಧ್ವಜ್ ವಿಡಿಯೋವನ್ನು ತಮ್ಮ ಸಿಬ್ಬಂದಿಗೆ ಕಳುಹಿಸಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಪತ್ರಕರ್ತನ ಕರ್ತವ್ಯ ಪ್ರಜ್ಞೆಗೆ ಮೆಚ್ಚುಗೆ ಸೂಚಿಸಿದ್ದಾರೆ.

ಮಗಳವಾರ ನಕ್ಸಲರು ನಡೆಸಿದ ದಾಳಿಯಲ್ಲಿ ಡಿಡಿ ವಾಹಿನಿಯ ಕ್ಯಾಮೆರಾ ಮನ್ ಅಚ್ಯುತನಂದ್ ಸಹು ಮತ್ತು ಇಬ್ಬರು ಸಿಆರ್ ಪಿಎಫ್ ಯೋಧರು ಬಲಿಯಾಗಿದ್ದಾರೆ. ಮೋರಧ್ವಜ್ ವಿಡಿಯೋವನ್ನು ಟ್ವೀಟ್ ಮಾಡಿಕೊಂಡಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಪ್ರಾಣ ಹೋಗುವ ಸಂದರ್ಭದಲ್ಲಿಯೂ ವಿಡಿಯೋ ಮಾಡಿದ ನಿಮ್ಮ ಧೈರ್ಯಕ್ಕೆ ನಾನು ಗೌರವ ಸೂಚಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *