ಜಾಲಿರೈಡ್‍ಗೆ ಹೋದ ಅಪ್ರಾಪ್ತನ ಭೀಕರ ಸಾವು – ಹೆತ್ತವರ ಮೇಲೆ ಖಾಕಿ ಕೇಸ್

ಬೆಂಗಳೂರು: ಹೊಸೂರು ಎಲಿವೇಟೆಡ್ ಹೈವೆಯಲ್ಲಿ ಮೂರು ರೌಂಡ್ ಜಾಲಿ ರೈಡ್ ಮಾಡಿ, ನಾಲ್ಕನೇ ರೌಂಡ್‍ಗೆ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ.

ಜಾಲಿ ರೈಡ್‍ಗೆ ಅಪ್ಪನ ಕಾರ್ ತೆಗೆದುಕೊಂಡು ಹೋದ ಮೂವರಲ್ಲಿ ಒಬ್ಬ ಅಪ್ರಾಪ್ತ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಹೊಸೂರು ರಸ್ತೆಯಲ್ಲಿ ನಡೆದಿದೆ.

ಐಟಿ ಫ್ರೊಫೆಷನಲ್‍ನಲ್ಲಿ ಕೆಲಸ ಮಾಡೋ ಪ್ರತಿಷ್ಠಿತ ಕುಟುಂಬದ ಮೂವರು ಮಕ್ಕಳು ಜಾಲಿ ರೈಡ್‍ಗಾಗಿ ತಮ್ಮ ತಂದೆಯ ಕಾರ್‍ಗಳನ್ನ ತೆಗೆದುಕೊಂಡು ಹೋಗಿದ್ದಾರೆ. ಶನಿವಾರ ರಾತ್ರಿ ಮೂರು ಗಂಟೆ ಸಮಯದಲ್ಲಿ ಹೊಸೂರು ರಸ್ತೆಯ ಎಲಿವೇಟೆಡ್ ರಸ್ತೆಯನ್ನ ಇಳಿಯುವ ವೇಳೆ ಸ್ಕೋಡಾ, ಇನ್ನೋವಾ ಮತ್ತು ಎಸ್ ಕ್ಲಾಸ್, ಒಂದಕ್ಕೊಂದು ಉಜ್ಜಿಕೊಂಡಿವೆ.

ಈ ವೇಳೆ ಕಾರನ್ನ ಹುಡುಗರು 150 ಕಿಮೀ ವೇಗದಲ್ಲಿ ಓಡಿಸ್ತಿದ್ರು ಎನ್ನಲಾಗಿದೆ. ಪರಿಣಾಮ ಸ್ಕೋಡಾ ಕಾರ್ ಎಡಗಡೆಯ ಡಿವೈಡರ್‍ಗೆ ಹೊಡೆದು ಪಲ್ಟಿಯಾಗಿದೆ. ಸ್ಕೋಡಾ ಕಾರ್‍ನಲ್ಲಿದ್ದ ಅರ್ಪನ್ ಸಲೀಂ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಇನ್ನು ಇನ್ನೋವಾ ಕಾರ್ ಬಲಬದಿಯ ಡಿವೈಡರ್ ದಾಟಿ ಟ್ಯಾಂಕರ್‍ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಹಾಲಿನ ಟ್ಯಾಂಕರ್ ಅಕ್ಸಲರೇಟ್ ಕಟ್ ಆಗಿ ಪಲ್ಟಿಯಾಗಿದೆ. ಅದೃಷ್ಟವಶಾತ್ ಇನ್ನೋವಾ ಕಾರ್‍ನಲ್ಲಿ ಯುವಕ ಪ್ರಾಣಾಪಾಯದಿಂದ ಬಚಾವಾಗಿದ್ದಾನೆ.

ಮೂವರೂ 16 ವರ್ಷದ ಹುಡುಗರಾಗಿದ್ದು, ಪಿಯುಸಿ ಓದುತ್ತಿದ್ದರೆನ್ನಲಾಗಿದೆ. ಡಿಎಲ್ ಇಲ್ಲದೇ ಮಕ್ಕಳಿಗೆ ಕಾರ್ ಕೊಟ್ಟ ತಪ್ಪಿಗೆ ಮೂವರು ತಂದೆಯರ ಮೇಲೆ ಕೇಸ್ ಹಾಕಲಾಗಿದೆ. ಇಬ್ಬರೂ ಮಕ್ಕಳನ್ನ ಬಾಲ ನ್ಯಾಯಾಲಯಕ್ಕೆ ಹಾಜರುಪಡಿಸಲು ಮಡಿವಾಳ ಸಂಚಾರಿ ಪೊಲೀಸ್ರು ಸಿದ್ಧತೆ ಮಾಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *