ಜೆಎನ್‍ಯು ವಿದ್ಯಾರ್ಥಿ ಮುಖಂಡ ಉಮರ್ ಖಾಲಿದ್ ಮೇಲೆ ಗುಂಡಿನ ದಾಳಿ

ನವದೆಹಲಿ: ಜವಹರಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಮುಖಂಡ ಉಮರ್ ಖಾಲಿದ್ ಮೇಲೆ ದೆಹಲಿಯ ಸಂಸತ್ತ್ ಬಳಿಯಿರುವ ಸಂವಿಧಾನ ಭವನದ ಹತ್ತಿರ ಗುಂಡಿನ ದಾಳಿ ನಡೆದಿದೆ.

ಇಂದು ಮಧ್ಯಾಹ್ನ ಸಂವಿಧಾನ ಭವನದಲ್ಲಿ ಏರ್ಪಡಿಸಿದ್ದ `ಯುನೈಟೆಡ್ ಎಗೆನೆಸ್ಟ್ ಹೇಟ್’ ಎಂಬ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಅಪರಿಚಿತ ವ್ಯಕ್ತಿಯಿಂದ ಗುಂಡಿನ ದಾಳಿ ನಡೆದಿದೆ. ದಾಳಿಯಿಂದ ಉಮರ್ ಖಾಲಿದ್‍ರವರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಉಮರ್ ಖಾಲಿದ್ ರವರು, ಸರ್ಕಾರದ ವಿರುದ್ಧ ಯಾರು ಮಾತನಾಡುತ್ತಾರೋ ಅಂತಹರ ವಿರುದ್ಧ ಈ ರೀತಿಯ ದಾಳಿಗಳು ನಡೆಯುತ್ತಿವೆ. ದೇಶದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಸರ್ಕಾರ ವಿರುದ್ಧ ಮಾತನಾಡುವವರ ಮೇಲೆ ದಾಳಿಗಳು ಎಗ್ಗಿಲ್ಲದೆ ಸಾಗುತ್ತಿವೆ ಎಂದು ಹೇಳಿದ್ದಾರೆ.

ಪ್ರತ್ಯಕ್ಷದರ್ಶಿಗಳು ಹೇಳಿರುವ ಪ್ರಕಾರ, ಉಮರ್ ಖಾಲಿದ್‍ರವರು ನಮ್ಮ ಜೊತೆಯಲ್ಲೇ ಇದ್ದರು, ನಾವು ಟೀ ಕುಡಿಯಲು ಟೀ ಸ್ಟಾಲ್ ಬಳಿ ನಿಂತಿದ್ದೆವು. ಆಗ ಬಿಳಿ ಅಂಗಿ ಧರಿಸಿದ್ದ ಓರ್ವ ಅಪರಿಚಿತ ವ್ಯಕ್ತಿ ನಮ್ಮನ್ನು ತಳ್ಳಿ, ಏಕಾಏಕಿ ಖಾಲಿದ್ ಮೇಲೆ ಗುಂಡಿನ ದಾಳಿಯನ್ನು ಆರಂಭಿಸಿದ. ಕೂಡಲೇ ಖಾಲಿದ್ ಕೆಳಕ್ಕೆ ಬಿದ್ದರು. ಅದೃಷ್ಟವಶಾತ್ ಅವರಿಗೆ ಯಾವುದೇ ಗುಂಡುಗಳು ತಾಗಿರಲಿಲ್ಲ. ನಾವು ಅಪರಿಚಿತ ವ್ಯಕ್ತಿಯನ್ನು ಹಿಡಿಯಲು ಮುಂದಾದಾಗ ಅವನು ತಪ್ಪಿಸಿಕೊಂಡು ಪರಾರಿಯಾದ. ಈ ವೇಳೇ ಆತನ ಕೈಯಲ್ಲಿದ್ದ ಪಿಸ್ತೂಲು ಕೈ ಜಾರಿ ಕೆಳಕ್ಕೆ ಬಿತ್ತು ಎಂದು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Comments

Leave a Reply

Your email address will not be published. Required fields are marked *