ಬಿಜೆಪಿ ಕಾರ್ಯಕರ್ತರಿಗೆ ಗನ್ ತೋರಿಸಿದ ಕೈ ಅಭ್ಯರ್ಥಿ: ವಿಡಿಯೋ

ರಾಂಚಿ: ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಗಲಾಟೆ ವೇಳೆ ಕಾಂಗ್ರೆಸ್ ಅಭ್ಯರ್ಥಿಯೋರ್ವ ಸಾರ್ವಜನಿಕರ ಮುಂದೆಯೇ ಗನ್ ತೋರಿಸಿರುವ ಘಟನೆ ಜಾರ್ಖಂಡ್ ನ ಪಾಲಮು ಜಿಲ್ಲೆಯಲ್ಲಿ ನಡೆದಿದೆ.

ಇಂದು ಜಾರ್ಖಂಡ್‍ನ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ನಡೆದಿದ್ದು, ಈ ವೇಳೆ ಬಿಜೆಪಿ ಅಭ್ಯರ್ಥಿ ಅಲೋಕ್ ಚೌರಾಸಿಯಾ ಅವರು ಕೋಸಿಯಾರ ಗ್ರಾಮದ ಬೂತ್ ಒಳಗೆ ಹೋಗುತ್ತಿದ್ದ ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್ ತ್ರಿಪಾಠಿಯನ್ನು ತಡೆದಿದ್ದಾರೆ. ಈ ವಿಚಾರಕ್ಕೆ ಎರಡು ಪಕ್ಷದ ಕಾರ್ಯಕರ್ತರ ನಡುವೆ ಗಲಾಟೆ ಉಂಟಾಗಿ ತ್ರಿಪಾಠಿ ಗನ್ ತೋರಿಸಿದ್ದಾರೆ.

ಈ ಗಲಾಟೆಯಲ್ಲಿ ಕೆಲ ಬಿಜೆಪಿ ಕಾರ್ಯಕರ್ತರು ತ್ರಿಪಾಠಿಯವರ ಮೇಲೆ ಕಲ್ಲುಗಳನ್ನು ಎಸೆದಿದ್ದಾರೆ. ಇದರಿಂದ ಕೋಪಗೊಂಡ ತ್ರಿಪಾಠಿ ಸಾರ್ವಜನಿಕವಾಗಿಯೇ ಗನ್ ಅನ್ನು ಹೊರ ತೆಗೆದು ತೋರಿಸುವ ಮೂಲಕ ಎದುರಾಳಿಗಳಿಗೆ ಭಯ ಹುಟ್ಟಿಸುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಸ್ಥಳದಲ್ಲಿ ಇದ್ದ ರಕ್ಷಣಾ ಸಿಬ್ಬಂದಿ ಅವರನ್ನು ಸುತ್ತುವರಿದು ಅಲ್ಲಿಂದ ವಾಪಸ್ ಕಳುಹಿಸಿದ್ದಾರೆ. ಈ ವೇಳೆ ಬಿಜೆಪಿ ಕಾರ್ಯಕರ್ತರು ತ್ರಿಪಾಠಿ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ.

ಜಾರ್ಖಂಡ್ ರಾಜ್ಯದಲ್ಲಿ ಇಂದು ನಡೆದ ಮೊದಲ ಹಂತದ ಮತದಾನದಲ್ಲಿ ಚತ್ರ, ಪಾಲಾಮು, ಗುಮ್ಲಾ, ಗಹ್ರ್ವಾ, ಲತೇಹರ್ ಮತ್ತು ಲೋಹರ್‍ದಗ್ಗ ಎಂಬ ಆರು ಜಿಲ್ಲೆಗಳ 13 ಕ್ಷೇತ್ರಗಳು ಮತದಾರರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಮತ ಚಲಾಯಿಸಿದ್ದಾರೆ. ಇಂದು ಮತದಾನ ನಡೆದಿರುವ ಬಹುತೇಕ ಕ್ಷೇತ್ರಗಳು ಮಾವೋವಾದಿ ಪೀಡಿತ ಪ್ರದೇಶಗಳಾಗಿವೆ. ಈ ಚುನಾವಣಾ ಫಲಿತಾಂಶ ಡಿಸೆಂಬರ್ 23 ರಂದು ಪ್ರಕಟಗೊಳ್ಳಲಿದೆ.

37 ಲಕ್ಷ ಜನರು ವಿಧಾನ ಸಭೆ ಚುನಾವಣೆಯ ಮೊದಲ ಹಂತದಲ್ಲಿ ಮತದಾನ ಮಾಡಿದ್ದು, 15 ಮಹಿಳಾ ಅಭ್ಯರ್ಥಿಗಳು ಸೇರಿ 189 ಜನ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಈ ಚುನಾವಣಾ ಸಂಬಂಧ ಎಲ್ಲಾ ಕ್ಷೇತ್ರಗಳಿಗೂ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಮತದಾನ ಶಾಂತಿಯುತಾವಾಗಿ ನಡೆಯಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿತ್ತು.

Comments

Leave a Reply

Your email address will not be published. Required fields are marked *