ಕೆಎಸ್‌ಆರ್‌ಟಿಸಿ ಬಸ್ಸಿನಲ್ಲೇ ಪ್ರಯಾಣಿಸಿ ಸರಳತೆ ಮೆರೆದ ಜೆಡಿಎಸ್ ರಾಜ್ಯಾಧ್ಯಕ್ಷ

ಮೈಸೂರು: ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಹುಣಸೂರು ಕ್ಷೇತ್ರದ ಶಾಸಕ ಎಚ್.ವಿಶ್ವನಾಥ್ ಕೆಎಸ್‌ಆರ್‌ಟಿಸಿಯ ಸುವರ್ಣ ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸುವ ಮೂಲಕ ಸರಳತೆ ಮೆರೆದಿದ್ದಾರೆ.

ಹುಣಸೂರು ತಾಲೂಕು ಪ್ರವಾಸದಲ್ಲಿರುವ ಅವರು, ಕಾರ್ಯನಿಮಿತ್ತ ಹುಣಸೂರಿನ ಮುಳ್ಳೂರಿನಿಂದ ರಾಯನಹಳ್ಳಿಗೆ ತೆರಳುವ ಸಂದರ್ಭದಲ್ಲಿ ತಮ್ಮ ಐಶಾರಾಮಿ ಕಾರಿನ ಬದಲಿಗೆ ಕೆಎಸ್‌ಆರ್‌ಟಿಸಿಯ ಸುವರ್ಣ ಸಾರಿಗೆ ಬಸ್ಸಿನಲ್ಲೇ ಪ್ರಯಾಣ ಮಾಡಿದರು. ಪ್ರಯಾಣದ ವೇಳೆ ಸ್ವತಃ ಟಿಕೆಟ್ ಪಡೆದು ಸಾಮಾನ್ಯರಂತೆ ಪ್ರಯಾಣ ಬೆಳೆಸಿದ್ದರು.

ಈ ವೇಳೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಕುಂದು-ಕೊರತೆಗಳನ್ನು ಆಲಿಸಿದರು. ಶಾಸಕರ ಸರಳತೆಗೆ ಸಂತೋಷ ವ್ಯಕ್ತಪಡಿಸಿದ ಪ್ರಯಾಣಿಕರು, ಎಲ್ಲಾ ಶಾಸಕರು ಎಚ್.ವಿಶ್ವನಾಥ್ ಹಾಗೆ ಜನಸಾಮಾನ್ಯರೊಂದಿಗೆ ಬೆರೆತರೆ ಸಮಸ್ಯೆಗಳನ್ನು ಬಗೆಹರಿಸುವುದು ಸುಲಭವಾಗುತ್ತದೆ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಅಧಿಕಾರ ಸಿಕ್ಕ ಕೂಡಲೇ ರಾಜಕಾರಣಿಗಳು ಯಾವ ರೀತಿ ತಮ್ಮ ದರ್ಪ ತೋರುತ್ತಾರೆ ಎನ್ನುವುದನ್ನು ಎಲ್ಲರೂ ನೋಡಿರುತ್ತಾರೆ. ಆದರೆ ಜನಸಾಮಾನ್ಯರಂತೆ ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಸಿ ತಮ್ಮ ಸರಳೆಯನ್ನು ಎಚ್.ವಿಶ್ವನಾಥ್ ತೋರಿಸಿಕೊಟ್ಟಿದ್ದಾರೆ ಎಂದು ಜನ ಶ್ಲಾಘಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *