ಪುತ್ರ ಹಲ್ಲೆ ಮಾಡಿದ್ದು ಯಾಕೆ: ಸುವರ್ಣಸೌಧದಲ್ಲಿ ಜೆಡಿಎಸ್ ಶಾಸಕ ಸಾ ರಾ ಮಹೇಶ್ ಸ್ಪಷ್ಟನೆ

ಬೆಳಗಾವಿ: ದಮ್ಮಯ್ಯ ಬಿಟ್ಟುಬಿಡಿ ಅಂದ್ರೂ ಬಿಡದೇ ಯುವಕನಿಗೆ ಜೆಡಿಎಸ್ ಶಾಸಕರ ಪುತ್ರ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲೆಯ ಕೆ.ಆರ್ ನಗರದ ಶಾಸಕ ಸಾ ರಾ ಮಹೇಶ್ ಇಂದು ಸುವರ್ಣಸೌಧದಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಕಳೆದ ಎರಡೂವರೆ ವರ್ಷದ ಹಿಂದೆ ನನ್ನ ಮಗ ಜಯಂತ್ ಮತ್ತು ಸ್ನೇಹಿತರು ಮೈಸೂರಿನ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಅಂಗಡಿ ಮುಂದೆ ಹೋಗುತ್ತಿದ್ದಾಗ, ಹಲ್ಲೆಗೊಳಗಾದ ಚೇತನ್ ನನ್ನ ಮಗನ ಸ್ನೇಹಿತನ ಚೈನ್ ಕಿತ್ತುಕೊಂಡು ಹೋಗಿದ್ದ. ಆದರೆ ಘಟನೆ ನಡೆದ ಎರಡು ದಿನಗಳ ಬಳಿಕ ಮತ್ತೆ ಆ ಹುಡುಗ ಇವರ ಕಣ್ಣಿಗೆ ಬಿದ್ದ ಕಾರಣ ನನ್ನ ಮಗ ಹಾಗೂ ಆತನ ಸ್ನೇಹಿತರು ಆತನನ್ನು ಕರೆದುಕೊಂಡು ಬಂದು ವಿಚಾರಣೆ ನಡೆಸುವ ವೇಳೆ ಥಳಿಸಿದ್ದಾರೆ.

ಇದಾದ ಬಳಿಕ ಚೇತನ್ ಕಳ್ಳತನ ಮಾಡಿದ್ದ ಅರ್ಧ ಚೈನ್ ಹಿಂದಿರುಗಿಸಿದ್ದಾನೆ. ಘಟನೆ ನಡೆದ ಬಳಿಕ ಈ ವಿಚಾರ ನನ್ನ ಗಮನಕ್ಕೆ ಬಂತು. ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಸಲಹೆ ನೀಡಿದ್ದೆ. ಆದರೆ ಹುಡುಗ ಅರ್ಧ ಚೈನ್ ವಾಪಸ್ ಕೊಟ್ಟ ಕಾರಣದಿಂದ ಪ್ರಕರಣವನ್ನು ಅಲ್ಲಿಗೇ ಕೈಬಿಟ್ಟಿದ್ದೆವು ಎಂದು ಹೇಳಿದರು.

ಇನ್ನು ಈ ವಿಡಿಯೋವನ್ನು ಯಾರೋ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಇದೇ ರೀತಿ ಘಟನೆ ಸಾರ್ವಜನಿಕರು ಮಾಡಿದರೆ ಪ್ರಕರಣ ಬೇರೆ ಸ್ವರೂಪವನ್ನು ಪಡೆದುಕೊಳ್ಳುತ್ತಿತ್ತು. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ಶಾಸಕರ ಮಗನಾಗಿ ಈ ರೀತಿ ಮಾಡಿದ್ದು ತಪ್ಪು. ತಪ್ಪು ಯಾರೇ ಮಾಡಿದ್ದರೂ ತಪ್ಪೇ, ನೈತಿಕವಾಗಿ ನಾನು ತಪ್ಪನ್ನು ಒಪ್ಪಿಕೊಳ್ಳುತ್ತೇನೆ. ಕಾನೂನು ರೀತಿ ಏನು ಕ್ರಮಗಳು ಬೇಕೋ ಅದನ್ನು ಮಾಡಲಿ ಎಂದರು.

https://youtu.be/dm-KjHaM4XA

Comments

Leave a Reply

Your email address will not be published. Required fields are marked *