ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮಧು ಬಂಗಾರಪ್ಪಗೆ ಭಾರೀ ಆಘಾತ!

ಶಿವಮೊಗ್ಗ: ತೀರ್ಥಹಳ್ಳಿ ತಾಲೂಕು ಜೆಡಿಎಸ್ ಅಧ್ಯಕ್ಷ ಮದನ್ ಹಾಗೂ 200ಕ್ಕೂ ಹೆಚ್ಚು ಪದಾಧಿಕಾರಿಗಳು ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡಿ ಬಿಜೆಪಿಗೆ ಸೇರಲು ಮುಂದಾಗಿದ್ದು, ಇದರಿಂದ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪಗೆ ಭಾರೀ ಆಘಾತ ನೀಡಿದ್ದಾರೆ.

ಈಗಾಗಲೇ ಸಾಮೂಹಿಕ ರಾಜೀನಾಮೆ ನೀಡಿದ್ದ ಮದನ್ ಹಾಗೂ ಇನ್ನಿತರ ಪದಾಧಿಕಾರಿಗಳು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಇಂದು ಬಿಜೆಪಿ ಪ್ರಾಥಮಿಕ ಸದಸ್ಯತ್ವವನ್ನು ಮದನ್ ಅವರು ಸ್ವೀಕರಿಸಿದ್ದು, ಬುಧವಾರದಂದು 200ಕ್ಕೂ ಹೆಚ್ಚು ಪದಾಧಿಕಾರಿಗಳ ಸಹಿತ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕಳೆದ ವಾರ ತೀರ್ಥಹಳ್ಳಿ ಜೆಡಿಎಸ್ ಮುಖಂಡರು ಸಾಮೂಹಿಕ ರಾಜೀನಾಮೆ ನೀಡಿದ್ದರು.

ತಾಲೂಕು ಘಟಕದ 30ಕ್ಕೂ ಹೆಚ್ಚು ಪದಾಧಿಕಾರಿಗಳಿಂದ ಪಕ್ಷದ ಹುದ್ದೆ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲಾಗಿದೆ. ಕ್ಷೇತ್ರದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಎಂ.ಮಂಜುನಾಥ ಗೌಡರ ವರ್ತನೆಯಿಂದ ಬೇಸತ್ತ ನಾಯಕರು ಈ ನಿರ್ಧಾರ ಕೈಗೊಂಡಿದ್ದಾರೆ. ಮದನ್ ಅವರು ಶಾಂತವೇರಿ ಗೋಪಾಲಗೌಡರ ಮೊಮ್ಮಗನಾಗಿದ್ದು, ತಾಲೂಕಿನಲ್ಲಿ ಜೆಡಿಎಸ್ ಅಸ್ಥಿತ್ವಕ್ಕೆ ಮುಖ್ಯ ಕಾರಣರಾಗಿದ್ದ ಯುವ ನಾಯಕ ಎಂದು ಹೆಸರು ಪಡೆದವರು. ಅಷ್ಟೇ ಅಲ್ಲದೆ, 2013ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಆಗಿ ಮದನ್ ಅವರು ಸ್ಪರ್ಧಿಸಿದ್ದರು.

ಲೋಕಸಭಾ ಚುನಾವಣೆ ಮುಂದಿರುವಾಗಲೇ ಜೆಡಿಎಸ್ ನಾಯಕರು ಈ ನಿರ್ಧಾರ ತೆಗೆದುಕೊಂಡಿರುವುದಕ್ಕೆ ಕ್ಷೇತ್ರದಲ್ಲಿ ಪಕ್ಷಕ್ಕೆ ಬಾರಿ ಪಟ್ಟು ಬೀಳಲಿದೆ. ಚುನಾವಣೆಗೆ ಬೆಂಬಲಿಸಬೇಕಾದ ನಾಯಕರೇ ಪಕ್ಷ ಬಿಟ್ಟು ವಿರೋಧ ಪಕ್ಷ ಸೇರುತ್ತಿರುವುದು ಜೆಡಿಎಸ್ ಪಾಳಯಕ್ಕೆ ತಲೆನೋವಾಗಿ ಪರಿಣಮಿಸಿದೆ.

Comments

Leave a Reply

Your email address will not be published. Required fields are marked *