ಕೃಷ್ಣಪ್ಪನವರನ್ನು ಸಾಯಿಸಿದ್ದೇ ಜೆಡಿಎಸ್ – ಬಸವರಾಜು ಗಂಭೀರ ಆರೋಪ

ತುಮಕೂರು: ಕಳೆದ ಬಾರಿ ಲೋಕಸಭೆ ಚುನಾವಣೆಯ ವೇಳೆ ಪಕ್ಷದ ಅಭ್ಯರ್ಥಿಯಾಗಿದ್ದ ಎ. ಕೃಷ್ಣಪ್ಪನವರನ್ನು ಗೆಲ್ಲಿಸ್ತೀವಿ ಅಂತ ಕರೆದುಕೊಂಡು ಬಂದು ಅವರನ್ನ ಜೆಡಿಎಸ್‍ನವರು ಸಾಯಿಸಿದರು ಎಂದು ಮಾಜಿ ಸಂಸದ, ಬಿಜೆಪಿ ಮುಖಂಡ ಬಸವರಾಜು ಗಂಭೀರ ಆರೋಪ ಮಾಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜೆಡಿಎಸ್ ಒಕ್ಕಲಿಗ ಮುಖಂಡರ ಕುತಂತ್ರದಿಂದ ಎ.ಕೃಷ್ಣಪ್ಪ ಪ್ರಾಣ ಬಿಟ್ಟರು. ಕೃಷ್ಣಪ್ಪ ಅವರನ್ನು ಗೆಲ್ಲಿಸುತ್ತೇವೆ ಅಂತ ಹೇಳಿ ಜೆಡಿಎಸ್‍ನ ಎಲ್ಲಾ ಮುಖಂಡರೂ ಮುದ್ದಹನುಮೇಗೌಡ ಪರ ಕೆಲಸ ಮಾಡಿದರು. ಹಾಗಾಗಿ ಯಾದವ ಸಮುದಾಯದ ಕೃಷ್ಣಪ್ಪ ಆ ನೋವಿನಿಂದ ಸಾವನ್ನಪ್ಪಿದರು. ‘ಅಂದು ಲಕ್ಕಪ್ಪ, ಇಂದು ಮುದ್ದಹನುಮೇಗೌಡ’ ಎಂದು ಜೆಡಿಎಸ್‍ನ ಒಕ್ಕಲಿಗ ಮುಖಂಡರು ಕರಪತ್ರ ಹಂಚಿದ್ದರು. ಹಾಗಾಗಿ ಜಾತಿಪ್ರೇಮ ಮೆರೆದರು ಎಂದು ಹರಿಹಾಯ್ದಿದ್ದಾರೆ.

ಜೆಡಿಎಸ್ ಅವರ ಕರಪತ್ರ ಅಂದು ಸುಂಟರಗಾಳಿ ಬೀಸಿದ ಹಾಗೆ ಬೀಸಿತ್ತು. ಈ ರೀತಿ ಸಂಚುಮಾಡಿ ಹಿಂದುಳಿದ ಮುಖಂಡನನ್ನ ಜೆಡಿಎಸ್‍ನವರು ಕೊಂದರು. ಚುನಾವಣಾ ದಿನ ಸ್ವತಃ ಎ.ಕೃಷ್ಣಪ್ಪ ನನಗೆ ಫೋನ್ ಮಾಡಿ, ಬಳಿಕ ಏನಾದರು ಹೊಟ್ಟೆಗೆ ಹಾಕ್ತಿರ ಅಂತ ಕೇಳಿ ನನ್ನ ಮನೆಗೆ ಬಂದಿದ್ದರು. ಆಗ ನಾನು ತಿಂಡಿಕೊಟ್ಟು ಅವರನ್ನು ಸಮಾಧಾನ ಮಾಡಿದ್ದೆ. ಯಾವ ಜೆಡಿಎಸ್ ಶಾಸಕರೂ ನನ್ನ ಜೊತೆಗಿಲ್ಲ, ನನ್ನನ್ನ ಪರದೇಶಿ ಮಾಡಿದ್ದಾರೆ ಅಂತ ಕೃಷ್ಣಪ್ಪ ಕಣ್ಣೀರು ಸುರಿಸಿದ್ದರು. ಅದಾದ ಮಾರನೇ ದಿನವೇ ಹೃದಯಾಘಾತದಿಂದ ಅವರು ಮೃತಪಟ್ಟರು ಎಂದು ಬಸವರಾಜು ಅವರು ಕಿಡಿಕಾರಿದ್ದಾರೆ.

ಬಿಜೆಪಿ ಸಂಭಾವ್ಯ ಅಭ್ಯರ್ಥಿಯಾದ ತಮಗೆ ಟಿಕೆಟ್ ಕೈ ತಪ್ಪುತ್ತೆ ಅನ್ನುವ ವದಂತಿ ಬಗ್ಗೆ ಪ್ರತಿಕ್ರಿಯಿಸಿ, ಹೊಲ ಉಳುಮೆ ಮಾಡಿ ಮಾಡಿ ನಮಗೆ ಅನುಭವ ಬಂದಿದೆ. ನಾವು ಹಳೆಯ ಎತ್ತುಗಳು. ಎಷ್ಟು ಏರಿ ಇದ್ದರು ಎಳೀತಿವಿ. ಅದಕ್ಕೆ ನಾವು ಯಾವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ. ಹಾಯಲ್ಲಾ ಒದೆಯಲ್ಲ ತೆಪ್ಪಗಿರ್ತಿವಿ. ಬಾರದು ಬಪ್ಪದು -ಬಪ್ಪದು ತಪ್ಪದು, ಹಾಗಾಗಿಯೇ ನಾನು ತೆಪ್ಪಗಿದ್ದೇನೆ. ನಾನು ಟಿಕೆಟ್‍ಗಾಗಿ ಅರ್ಜಿ ಹಾಕಿಲ್ಲ. ಪಕ್ಷದ ಆಂತರಿಕ ಸಮೀಕ್ಷಯಂತೆ ಟಿಕೆಟ್ ಕೊಡುತ್ತಾರೆ. ಹೀಗಾಗಿ ಟಿಕೆಟ್ ಸಿಗುತ್ತೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *