ಸರ್ಕಾರದಿಂದ ಎಸ್‍ಸಿ/ಎಸ್‍ಟಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಲಮನ್ನಾ?

ಬೆಂಗಳೂರು: ರೈತರ ಸಾಲಮನ್ನಾ ಬೆನ್ನಲ್ಲೇ ಜೆಡಿಎಸ್ ಹಾಗೂ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಎಸ್‍ಸಿ ಹಾಗೂ ಎಸ್‍ಟಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಲಮನ್ನಾ ಮಾಡುವ ಮೂಲಕ ಸಿಎಂ ಕುಮಾರಸ್ವಾಮಿ ಪರಿಶಿಷ್ಟ ಜಾತಿ ಹಾಗೂ ಪರಿಷಶಿಷ್ಟ ವರ್ಗದವರ ಮನವೊಲಿಕೆಗೆ ಮುಂದಾಗಿದ್ದಾರೆ.

ಹೌದು. ರಾಜ್ಯದಲ್ಲಿ ರೈತರ ಸಾಲಮನ್ನಾ ಮಾಡಿರುವ ಸಮ್ಮಿಶ್ರ ಸರ್ಕಾರವು, ಮತ್ತೊಂದು ಸಾಲಮನ್ನಾಕ್ಕೆ ಮುಂದಾಗಿದೆ. ಹೀಗಾಗಿ ಎಸ್‍ಸಿ ಹಾಗೂ ಎಸ್‍ಟಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಲಮನ್ನಾ ಮಾಡಲು ಸಿಎಂ ಕುಮಾರಸ್ವಾಮಿ ಚಿಂತನೆ ನಡೆಸಿದ್ದಾರೆ ಎನ್ನುವ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳ ಉಪ ನಿರ್ದೇಶಕರಿಂದ ರಾಜ್ಯ ಸರ್ಕಾರ ವಿವರ ಕೇಳಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಸಾಲಮನ್ನಾ ಸಲುವಾಗಿ ಸಮಾಜ ಕಲ್ಯಾಣ ಇಲಾಖೆಯಿಂದಲೂ ಮಾಹಿತಿ ಕಲೆಹಾಕುತ್ತಿದೆ. ಇದಲ್ಲದೇ ಶೈಕ್ಷಣಿಕ ಸಾಲದ ಬಗ್ಗೆ ಸಮರ್ಪಕ ಮಾಹಿತಿ ನೀಡುವಂತೆ ಸುತ್ತೋಲೆಯನ್ನು ಹೊರಡಿಸಿದೆ.

ರಾಷ್ಟ್ರೀಕೃತ ಬ್ಯಾಂಕ್ ಸೇರಿದಂತೆ ಎಲ್ಲಾ ವಿಧದ ಬ್ಯಾಂಕ್‍ಗಳಿಂದ ಪಡೆದಿರುವ ಶೈಕ್ಷಣಿಕ ಸಾಲದ ಮಾಹಿತಿ ಪಡೆದುಕೊಂಡ ನಂತರ, ಸಾಲಮನ್ನಾ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗುತ್ತದೆ. ಹೀಗಾಗಿ ಸಮಾಜಕಲ್ಯಾಣ ಇಲಾಖೆಯಿಂದ ಶೈಕ್ಷಣಿಕ ಸಾಲಮನ್ನಾಕ್ಕೆ ಆಡಳಿತಾತ್ಮಕ ಪ್ರಕ್ರಿಯೆ ಆರಂಭವಾಗಿದೆ.

ಸಿಎಂ ಕುಮಾರಸ್ವಾಮಿಯವರ ಎಸ್‍ಸಿ ಹಾಗೂ ಎಸ್‍ಟಿ ವಿದ್ಯಾರ್ಥಿಗಳ ಸಾಲಮನ್ನಾದ ಮೂಲಕ ಮಕ್ಕಳಲ್ಲಿ ತಾರತಮ್ಯ ಸೃಷ್ಟಿಸಲು ಮುಂದಾಗುತ್ತಿದ್ದಾರೆ. ಅಲ್ಲದೇ ಕೇವಲ ಪರಿಶಿಷ್ಟ ಜಾತಿ ಹಾಗೂ ಪರಿಷಶಿಷ್ಟ ವರ್ಗದವರ ಮಕ್ಕಳ ಸಾಲಮನ್ನಾ ಮಾಡಲು ಮುಂದಾಗಿರುವ ಸರ್ಕಾರಕ್ಕೆ ಉಳಿದ ಮಕ್ಕಳು ಏನು ಎಂಬುದು ಪ್ರಶ್ನೆಯಾಗಿದೆ. ಕೇವಲ ಎಸ್‍ಸಿ/ಎಸ್‍ಟಿ ಮಕ್ಕಳ ಸಾಲಮನ್ನಾ ಏಕೆ? ಸಿದ್ದರಾಮಯ್ಯರಂತೆ ಒಡೆದು ಆಳುವ ನೀತಿಗೆ ರಾಜ್ಯ ಸರ್ಕಾರ ಮುಂದಾಗುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *