ಕಾಂಗ್ರೆಸ್ ಇಲ್ಲದೇ ಬದುಕಲ್ಲ ಎಂದು ದಳಪತಿಗಳಿಗೆ ಗೊತ್ತಾಗಿದೆ: ಈಶ್ವರಪ್ಪ

ಬಾಗಲಕೋಟೆ: ನಮ್ಮ ಜೊತೆಗೆ ಕಾಂಗ್ರೆಸ್ ಇಲ್ಲದೇ ನಾವು ಬದುಕಲ್ಲ ಎಂಬುವುದು ಜೆಡಿಎಸ್ ನಾಯಕರಿಗೆ ಗೊತ್ತಾಗಿದೆ. ಹಾಗಾಗಿ ಸಚಿವ ರೇವಣ್ಣ ಕೈ ನಾಯಕರ ಮನೆಗಳಿಗೆ ಭೇಟಿ ನೀಡುವ ಮೂಲಕ ಸಹಾಯ ಕೇಳುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ವ್ಯಂಗ್ಯ ಮಾಡಿದ್ದಾರೆ.

ಕುಮಾರಸ್ವಾಮಿ ಅವರು ರಾಜ್ಯದ ಸಿಎಂ ಆಗಿರೋದನ್ನು ಮರೆತು ಪುತ್ರ ನಿಖಿಲ್ ಗೆಲುವಿಗಾಗಿ ಮಂಡ್ಯದ ಪ್ರತಿ ಹಳ್ಳಿಗಳಿಗೂ ತೆರಳಿ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ. ಇಂದಿನಿಂದಲೇ ನಿಮ್ಮ ಮುಖ್ಯಮಂತ್ರಿ ಸ್ಥಾನ ಮುಗಿಯಿತು ಎಂದು ಬರೆದಿಟ್ಟುಕೊಳ್ಳಿ. ರಾಜ್ಯದ ಮುಖ್ಯಮಂತ್ರಿಗಳಾಗದೇ ಮಂಡ್ಯ ಸಿಎಂ ಎಂಬ ರೀತಿಯಲ್ಲಿ ಕುಮಾರಸ್ವಾಮಿಯವರು ನಡೆದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆಲ್ಲುತ್ತಾರೆ ಎಂಬುವುದು ಗೊತ್ತಾದ ತಕ್ಷಣ ಜೆಡಿಎಸ್ ನವರು ಮೂರು ಜನ ಸುಮಲತಾರನ್ನ ತಂದು ನಿಲ್ಲಿಸಿದ್ದಾರೆ. ಇನ್ನೆಷ್ಟು ಜನ ಸುಮಲತಾ ಅಂತ ಇದ್ದರೋ ಹುಡಕಲಿ. ಒಂದು ವೇಳೆ ಮಂಡ್ಯದಲ್ಲಿ ಸಿಗದಿದ್ದರೆ ಬೇರೆ ಕಡೆಯಿಂದ ಕರೆದುಕೊಂಡು ಬಂದು ನಿಲ್ಲಿಸಲಿ. ಜೆಡಿಎಸ್ ಏನೇ ತಂತ್ರಗಳನ್ನು ರಚಿಸಿದರೂ ಸುಮಲತಾ ಅಂಬರೀಶ್ ಅವರ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮ ವೈರಿ ಮೈತ್ರಿ ಅಭ್ಯರ್ಥಿಯನ್ನು ಸೋಲಿಸಲು ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತಾರಿಗೆ ಪಕ್ಷದ ಹೈಕಮಾಂಡ್ ಬೆಂಬಲ ನೀಡಿದೆ. ಸುಮಲತಾರ ಪರವಾಗಿ ಪ್ರಚಾರ ಮಾಡುತ್ತಿರುವ ನಟರಾದ ಯಶ್ ಮತ್ತು ದರ್ಶನ್ ಅವರಿಗೆ ರಾಜ್ಯ ಸರ್ಕಾರ ಪೊಲೀಸ್ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.

Comments

Leave a Reply

Your email address will not be published. Required fields are marked *