ಬಿಜೆಪಿ ವಾರ್ಡ್‌ಗೆ ಹೆಚ್ಚು ಅನುದಾನ – ಸರ್ಕಾರದ ತಾರತಮ್ಯಕ್ಕೆ ಕೈ, ತೆನೆ ಕಿಡಿ

– ಕೋರ್ಟ್ ಮೂಲಕ ತಡೆಯಾಜ್ಞೆ

ಕೊಪ್ಪಳ: ಸರ್ಕಾರ ಬದಲಾವಣೆಯಾದ ಬೆನ್ನಲ್ಲೇ ಇದೀಗ ಬಿಜೆಪಿ ಸರ್ಕಾರ ಶಾಕ್ ಕೊಟ್ಟಿದೆ. ಬಿಜೆಪಿ ಸದಸ್ಯರು ಇರುವ ಕ್ಷೇತ್ರಗಳಿಗೆ ಮಾತ್ರ ಅನುದಾನ ಬಿಡುಗಡೆ ಮಾಡಿ, ತಾರತಮ್ಯ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್-ಜೆಡಿಎಸ್ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಹೌದು, ಕೊಪ್ಪಳದ ಗಂಗಾವತಿ ನಗರ ಪ್ರದೇಶದ ವಾರ್ಡ್ ಗಳ ಅಭಿವೃದ್ಧಿಗಾಗಿ ಸಮ್ಮಿಶ್ರ ಸರ್ಕಾರ 6.28 ಕೋಟಿ ರೂ. ಹಣ ಬಿಡುಗಡೆ ಮಾಡಿತ್ತು. ಆದರೆ ಸರ್ಕಾರ ಬದಲಾವಣೆಯಿಂದ ಇನ್ನೇನು ನಮ್ಮ ವಾರ್ಡ್ ಗಳಿಗೆ ಸಮನಾಗಿ ಅನುದಾನ ಬರುತ್ತದೆ ಎಂದು ಕಾದು ಕುಳಿತಿದ್ದ ಕಾಂಗ್ರೆಸ್ಸಿಗೆ ಇದೀಗ ಸರ್ಕಾರ ಶಾಕ್ ನೀಡಿದೆ.

ಬಿಜೆಪಿ ಸರ್ಕಾರ ಬಂದಿದ್ದೇ ತಡ, ಬಿಜೆಪಿ ಸದಸ್ಯರು ಪ್ರತಿನಿಧಿಸುತ್ತಿರೋ ವಾರ್ಡ್ ಗಳಿಗೆ ಅನುದಾನ ಹಂಚಲಾಗಿದೆ. ಆದರೆ ಕಾಂಗ್ರೆಸ್-ಜೆಡಿಎಸ್ ಸದಸ್ಯರಿರೋ ವಾರ್ಡ್ ಗಳಿಗೆ ಒಂದೇ ಒಂದು ನಯಾಪೈಸೆ ಅನುದಾನ ಬಿಡುಗಡೆ ಆಗಿಲ್ಲ. ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಧಾರವಾಡ ಹೈಕೋರ್ಟ್ ಮೇಟ್ಟಿಲೇರಿ ಬಿಜೆಪಿ ವಾರ್ಡ್ ಗಳಿಗೆ ಬಿಡುಗಡೆಯಾದ ಅನುದಾನಕ್ಕೆ ತಡೆಯಾಜ್ಞೆ ತಂದಿರುವುದಾಗಿ ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ ರಾಘವೇಂದ್ರ ಹೇಳಿದ್ದಾರೆ.

ಈ ಬಗ್ಗೆ ಜಿಲ್ಲಾಧಿಕಾರಿ ಪಿ. ಸುನೀಲ್ ಅವರನ್ನು ಕೇಳಿದರೆ, ಇಲ್ಲಿ ಕಾಂಗ್ರೆಸ್, ಬಿಜೆಪಿ ವಾರ್ಡ್ ಎಂದು ಡಿವೈಡ್ ಮಾಡಿಲ್ಲ. ಸಮಸ್ಯೆ ಯಾವ ವಾರ್ಡಿನಲ್ಲಿ ಜಾಸ್ತಿ ಇದೆ, ಅಂತಹ ವಾರ್ಡ್ ಗಳಿಗೆ ಹೆಚ್ಚಿನ ಅನುದಾನ ನೀಡಿಲಾಗಿದೆ ಅಷ್ಟೇ. ಇದರಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ ಎಂದು ಹೇಳಿದರು.

ಒಟ್ಟಿನಲ್ಲಿ ರಾಜಕೀಯ ತಿಕ್ಕಾಟಕ್ಕೆ ಗಂಗಾವತಿ ನಗರದ ಜನರು ಬಲಿಯಾಗುತ್ತಿದ್ದಾರೆ. ಈಗಲಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ತಾರತಮ್ಯ ಬಿಟ್ಟು ಸಮಾನವಾಗಿ ಎಲ್ಲಾ ವಾರ್ಡ್ ಗಳಿಗೆ ಅನುದಾನ ಬಿಡುಗಡೆ ಮಾಡಬೇಕಿದೆ ಎಂದು ಕೈ-ತೆನೆ ಸದಸ್ಯರು ಒತ್ತಾಯಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *