ಅಂದು ಸಿದ್ದರಾಮಯ್ಯಗೆ ಅವಾಜ್ – ಇಂದು ಯತೀಂದ್ರ ಜೊತೆ ಪ್ರಚಾರ!

– ಕಾಂಗ್ರೆಸ್ ಅಭ್ಯರ್ಥಿ ಪರ ಮರಿಸ್ವಾಮಿ ಪ್ರಚಾರ
– ನಾವು ಒಂದಾದ ಮೇಲೆ ಪ್ರಚಾರ ಮಾಡಬೇಕು

ಮೈಸೂರು: ಕಳೆದ ವಿಧಾನಸಭಾ ಚುನಾವಣೆ ಪ್ರಚಾರ ವೇಳೆ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರಿಗೆ ಅವಾಜ್ ಹಾಕಿದ ಜೆಡಿಎಸ್ ಕಾರ್ಯಕರ್ತ ಮರಿಸ್ವಾಮಿ ಇಂದು ಅವರ ಪುತ್ರ ಶಾಸಕ ಡಾ. ಯತೀಂದ್ರ ಹಾಗೂ ಜಿ.ಟಿ. ದೇವೇಗೌಡ ಪುತ್ರ ಹರೀಶ್ ಗೌಡ ಜೊತೆ ನಿಂತುಕೊಂಡು ವಿಜಯಶಂಕರ್ ಪರವಾಗಿ ಪ್ರಚಾರ ಮಾಡಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮರಿಸ್ವಾಮಿ, ಈಗ ಎರಡು ಸರ್ಕಾರ ಒಂದಾಗಿದೆ. ಆದರೆ ಅಂದು ಕಾಂಗ್ರೆಸ್ ಪಕ್ಷ ಹಾಗೂ ಜೆಡಿಎಸ್ ಪಕ್ಷ ಬೇರೆ ಬೇರೆ ಇತ್ತು. ಆಗ ನಾವು ನಮ್ಮ ಪಕ್ಷಕ್ಕಾಗಿ ಫೈಟ್ ಮಾಡಬೇಕಿತ್ತು. ಹಾಗಾಗಿ ನಾನು ಬರಲ್ಲ ಎಂದು ಹೇಳಿದ್ದೆ. ಆಗ ನಾನು ಜೆಡಿಎಸ್‍ನಲ್ಲಿದ್ದೇನೆ. ಜೆಡಿಎಸ್‍ನಲ್ಲೇ ಇರುತ್ತೇನೆ. ನಾನು ಕಾಂಗ್ರೆಸ್‍ಗೆ ಬರಲ್ಲ ಎಂದು ಹೇಳಿದ್ದೆ. ಈಗ ಇಬ್ಬರು ಒಂದಾಗಿದ್ದಾರೆ. ಅಲ್ಲದೆ ಮುಖ್ಯಮಂತ್ರಿ ಪಟ್ಟ ಕೂಡ ನಮ್ಮ ಪಕ್ಷಕ್ಕೆ ಕೊಟ್ಟಿದ್ದಾರೆ. ಅವರು ಎಂಪಿ ತೆಗೆದುಕೊಂಡಿದ್ದಾರೆ. ಈಗ ನಾವು ಒಂದಾದ ಮೇಲೆ ಪ್ರಚಾರ ಮಾಡಲೇಬೇಕು. ಇದರಲ್ಲಿ ಬೇಸರ ಇಲ್ಲ. ಏಕೆಂದರೆ ರಾಜಕೀಯದಲ್ಲಿ ಇದೆಲ್ಲ ಮಾಮೂಲಿ ಎಂದರು.

ಸಿದ್ದರಾಮಯ್ಯ ಪ್ರಚಾರಕ್ಕೆ ಬಂದು ಬಾ ಮರಿಸ್ವಾಮಿ ಎಂದು ಕರೆದಾಗ ನಾನು ಹೋಗುತ್ತೇನೆ. ಏಕೆಂದರೆ ನಾವು ಈಗ ಒಂದಾಗಿದ್ದೇವೆ. ಸಿದ್ದರಾಮಯ್ಯ ಮಗನ ಜೊತೆ ಮಾತನಾಡಿದ್ದೇನೆ. ಸಿದ್ದರಾಮಯ್ಯ ಜೊತೆಗೂ ಮಾತನಾಡುತ್ತೇನೆ. ಆಗ ಅವರು ಕರೆದಾಗ ನಮ್ಮ ಪಕ್ಷ ಬೇರೆ ಅವರ ಪಕ್ಷ ಬೇರೆ ಆಗಿತ್ತು. ನಾನು ಅವರ ಪಕ್ಷಕ್ಕೆ ಹೋದಾಗ ನಮ್ಮ ಪಕ್ಷದ ಗತಿ ಏನೂ ಆಗಬೇಕಿತ್ತು. ಅವರು ಕರೆದಾಗ ನಾನು ಓಡಿ ಹೋಗಬೇಕಿತ್ತಾ? ನಾವು ನಮ್ಮ ಪಕ್ಷವನ್ನು ಉಳಿಸಿಕೊಳ್ಳಬೇಕಿತ್ತು. ಹಾಗಾಗಿ ಅಂದು ಕಾಂಗ್ರೆಸ್‍ಗೆ ಹೋಗಲ್ಲ ಎಂದಿದ್ದೆ ಎಂದು ಹೇಳಿದರು.

ಎರಡು ಒಂದಾಗದೇ ಇದ್ದಾಗ ಜಗಳ ಮಾಡುವುದು ಸರಿ. ಈಗ ಒಂದಾದಾಗ ಜಗಳ ಮಾಡುವುದು ಸರಿಯಲ್ಲ. ಇದು ಹುಟ್ಟಿರೋದೇ ಮಂಡ್ಯದಿಂದ. ಮಂಡ್ಯ ಸರಿಯಾಗಿದ್ದರೆ, ಕರ್ನಾಟಕ ರಾಜ್ಯನೇ ಸರಿಯಾಗಿರುತ್ತೆ. ಮಂಡ್ಯದಲ್ಲಿ ಸರಿಯಾಗಿ ಹೊಂದಾಣಿಕೆ ಮಾಡಿಸಬೇಕು. ಹಾಸನ, ಮೈಸೂರಿನಲ್ಲಿ ಎಲ್ಲ ಸರಿಯಿದೆ. ಆದರೆ ಮಂಡ್ಯದಲ್ಲಿ ಸರಿಯಿಲ್ಲ ಎಂದು ಮರಿಸ್ವಾಮಿ ಹೇಳಿದರು.

ಎರಡು ಪಕ್ಷ ಒಂದಾದ ಮೇಲೆ ಅವರ ಅಭ್ಯರ್ಥಿ ಜೊತೆ ಪರವಾಗಿಯೂ ಪ್ರಚಾರ ಮಾಡಬೇಕು. ನಮ್ಮ ಪಕ್ಷದ ಅಭ್ಯರ್ಥಿ ಪರವಾಗಿಯೂ ಪ್ರಚಾರ ಮಾಡಬೇಕು. ಹಾಗಾಗಿ ನನಗೆ ಯಾವುದೇ ಬೇಸರ ಇಲ್ಲ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *