ದಲಿತರು ದೇವಾಲಯ ಪ್ರವೇಶಿಸಿದ್ದಕ್ಕೆ ಜಾತ್ರೆಯನ್ನ ಅರ್ಧಕ್ಕೆ ನಿಲ್ಸಿದ್ರು- ಆಹಾರ ನೀರು ಬಿಟ್ಟು ಮೂಕಪ್ರಾಣಿಯ ರೋಧನೆ

ತುಮಕೂರು: ಗೃಹ ಸಚಿವರ ಹಾಗೂ ಕಾನೂನು ಸಚಿವರ ತವರಲ್ಲೇ ದಲಿತರ ದೇವಾಲಯ ಪ್ರವೇಶ ನಿಷೇಧಕ್ಕೆ ಮೂಕ ಪ್ರಾಣಿಯೊಂದು ಆಹಾರ ನೀರು ಬಿಟ್ಟು ರೋಧಿಸುತ್ತಿದೆ.

ತುಮಕೂರು ತಾಲೂಕಿನ ಕೊತ್ತಿಹಳ್ಳಿ ಹಾಗೂ ಮಲ್ಲಸಂದ್ರಪಾಳ್ಯ ಎನ್ನುವ ಎರಡು ಗ್ರಾಮಗಳ ದೇವತೆಯಾಗಿರೋ ಕುಚ್ಚಂಗಿಯಮ್ಮನ ಜಾತ್ರೆ ಅರ್ಧಕ್ಕೆ ನಿಂತು ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ.

ಕಳೆದ ಮೂರು ದಿನಗಳ ಹಿಂದೆ ಕುಚ್ಚಂಗಿಯಮ್ಮನ ಜಾತ್ರೆಯನ್ನು ಊರಿನಲ್ಲಿ ನಡೆಸುತ್ತಿದ್ದರು. ಮೊದಲನೇ ದಿನ ಆರತಿ ಸೇವೆಯಲ್ಲಿ ದಲಿತ ಕಾಲೋನಿಯ ಜನರು ದೇವಾಲಯ ಪ್ರವೇಶ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಇಡೀ ಜಾತ್ರೆ ಅರ್ಧಕ್ಕೆ ನಿಂತುಬಿಟ್ಟಿದೆ. ದಲಿತರಿಗೆ ಇಷ್ಟು ವರ್ಷಗಳ ಕಾಲ ಕೇವಲ ದೇವಾಲಯದ ಆಚೆಯಿಂದಲೇ ಆರತಿಗೆ ಅನುಮತಿ ಇದ್ದು, ಮೊನ್ನೆ ನಡೆದ ಜಾತ್ರೆಯಲ್ಲಿ ದೇವಾಲಯ ಪ್ರವೇಶಿಸಿದ್ದಾರೆ. ಇದರಿಂದ ದೇವರಿಗೆ ಅಮಂಗಳ ಎಂದು ಜಾತ್ರೆಯನ್ನೇ ನಿಲ್ಲಿಸಿದ್ದಾರೆ.

ಜಾತ್ರೆ ಅರ್ಧಕ್ಕೆ ನಿಂತ ದಿನದಿಂದಲೂ ಊರಿನ ಬಸವನ ರೋಧನೆ ಮಾತ್ರ ನಿಂತಿಲ್ಲ. ಕುಚ್ಚಂಗಿಯಮ್ಮ ದೇವಿಯೇ ಸ್ವತಃ ಬಸವನ ಮೈಮೇಲೆ ಬಂದು ರೋಧಿಸಿದಂತೆ ಗ್ರಾಮದಲ್ಲಿ ಮಾತುಗಳು ಕೇಳಿಬರುತ್ತಿವೆ. ಒಂದು ಕುರ್ಚಿಯನ್ನು ಬಿಟ್ಟು ಬಸವ ಎಲ್ಲಿಗೂ ಕದಲದಂತಾಗಿದೆ. ಯಾರನ್ನು ಹತ್ತಿರಕ್ಕೆ ಸೇರಿಸದ ಬಸವ ಎರಡು ದಿನಗಳ ಕಾಲ ಕಣ್ಣೀರು ಹಾಕುತ್ತಿದೆ. ನಿಂತ ಜಾತ್ರೆ ಮುಂದುವರೆಯಬೇಕು ಎನ್ನುವ ಹಂಬಲದಿಂದ ಇದ್ದ ಕಡೆಯೇ ಇದ್ದು ಜಾತಿ ವ್ಯವಸ್ಥೆಯ ವಿರುದ್ಧ ಮೂಕಪ್ರತಿಭಟನೆ ನಡೆಸುತ್ತಿರುವಂತಿದೆ. ಪ್ರತಿನಿತ್ಯ ಗ್ರಾಮಸ್ಥರಿಂದ ಪೂಜಿಸಲ್ಪಡುತ್ತಿದ್ದ ಈ ಬಸವ ಜಾತ್ರೆ ನಿಂತ ದಿನದಿಂದ ಯಾರಿಂದಲೂ ಪೂಜೆ ಮಾಡಿಸಿಕೊಳ್ಳದೇ ತನ್ನ ಹಠ ವ್ಯಕ್ತಪಡಿಸುತ್ತಿದೆ.

Comments

Leave a Reply

Your email address will not be published. Required fields are marked *