ಮಲ್ಲಿಗೆ ಬೆಲೆಯಲ್ಲಿ ಭಾರೀ ಕುಸಿತ- ಬೆಳೆಗಾರರು ಕಂಗಾಲು

ಬಳ್ಳಾರಿ: ಮಲ್ಲಿಗೆ ಅಂದ್ರೆ ಸುವಾಸನೆ ಭರಿತ ವಾಸನೆ ಅಂತಾರೆ. ಆದೆ ಘಮ ಘಮ ಅನ್ನೋ ಮಲ್ಲಿಗೆ ಬೆಳೆದ ರೈತರ ಬಾಳಲ್ಲಿ ಸುವಾಸನೆ ಇಲ್ಲದಾಗಿದೆ.

ಹೌದು. ಕಷ್ಟಪಟ್ಟು ಮಲ್ಲಿಗೆ ಬೆಳೆದ ರೈತರಿಗೆ ಸರಿಯಾದ ಪ್ರತಿಫಲ ಸಿಗ್ತಿಲ್ಲ. ಹೂ ಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದೆ. ಕೆ.ಜಿಗೆ 200 ರೂಪಾಯಿಂದ 500 ರೂಪಾಯಿಗೆ ಮಾರಾಟವಾಗುತ್ತಿದ್ದ ಮಲ್ಲಿಗೆ ಹೂವಿನ ಬೆಲೆ ಇದೀಗ ಅಕ್ಷರಶ ಪಾತಾಳಕ್ಕೆ ಕುಸಿದಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಬಿಸಿಲು ಇದ್ರೂ ಬಳ್ಳಾರಿ ತಾಲೂಕಿನ ವೈ ಕಗ್ಗಲ್ ಗ್ರಾಮದ ಪ್ರತಿಯೊಬ್ಬ ರೈತರು ತಮ್ಮ ಜಮೀನುಗಳಲ್ಲಿ ಮಲ್ಲಿಗೆ ಬೆಳೆಯನ್ನ ಬೆಳೆಯುತ್ತಾರೆ. ಸೂಜಿ ಮಲ್ಲಿಗೆ, ದುಂಡು ಮಲ್ಲಿಗೆ ಸೇರಿದಂತೆ ವಿವಿಧ ರೀತಿಯ ಸುವಾಸನೆ ಭರಿತ ಮಲ್ಲಿಗೆ ಹೂಗಳನ್ನು ಬೆಳೆಯುತ್ತಾರೆ.

ಇದೂವರೆಗೂ ಮಲ್ಲಿಗೆ ಹೂವಿಗೆ ಮಾರುಕಟ್ಟೆಯಲ್ಲಿ ಉತ್ತಮವಾದ ಬೆಲೆ ಸಿಗುತ್ತಿದ್ದ ಪರಿಣಾಮ ರೈತರು ಲಾಭ ಗಳಿಸುತ್ತಿದ್ದರು. ಆದ್ರೆ ಈ ಬಾರಿ ಮಲ್ಲಿಗೆ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿದೆ. ಕೆ.ಜಿ ಮಲ್ಲಿಗೆಗೆ ಕೇವಲ 15-30 ರೂಪಾಯಿ ಬೆಲೆ ಸಿಗುತ್ತಿರುವುದರಿಂದ ಸಾಲ ಸೋಲ ಮಾಡಿ ಬೆಳೆ ಬೆಳೆದ ರೈತರು ಇದೀಗ ಅಕ್ಷರಶಃ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ.

ಒಟ್ಟಿನಲ್ಲಿ ಬಳ್ಳಾರಿಯ ವೈ ಕಗ್ಗಲ್ ಗ್ರಾಮದ ರೈತರು ಬೆಳೆದ ಮಲ್ಲಿಗೆ ಬೆಳೆ ಎಲ್ಲರ ತೋಟಗಳಲ್ಲಿ ಅರಳಿದ್ರೂ, ರೈತರ ಬದುಕು ಮಾತ್ರ ಅರಳದಂತಾಗಿದೆ. ರೈತರು ಯಾಕಪ್ಪ ಮಲ್ಲಿಗೆ ಹೂ ಬೆಳೆದೆ ಅನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟೆಲ್ಲಾ ಆದ್ರೂ ತೋಟಗಾರಿಕೆ ಇಲಾಖೆ ಮಾತ್ರ ಮಲ್ಲಿಗೆ ಬೆಳೆಗೆ ಬೆಲೆ ಕುಸಿತವಾದ್ರೂ ರೈತರ ನೆರವಿಗೆ ಧಾವಿಸದಿರುವುದು ರೈತರನ್ನು ಮತ್ತಷ್ಟೂ ಕಂಗಾಲು ಮಾಡಿದೆ.

Comments

Leave a Reply

Your email address will not be published. Required fields are marked *