6 ತಿಂಗಳ ಹಿಂದಷ್ಟೇ ಮದುವೆಯಾಗಿ ಸೇನೆಗೆ ಮರಳಿದ್ದ ಯೋಧ ಉಗ್ರರ ಅಟ್ಟಹಾಸಕ್ಕೆ ಹುತಾತ್ಮ

ಹುಬ್ಬಳ್ಳಿ: ಜಮ್ಮು-ಕಾಶ್ಮೀರ ಕಣಿವೆ ರಾಜ್ಯದಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಗೆ ಧಾರವಾಡ ಜಿಲ್ಲೆಯ ಯೋಧ ಹುತಾತ್ಮರಾಗಿದ್ದಾರೆ.

ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದ ಮಂಜುನಾಥ ಹನಮಂತಪ್ಪ ಓಲೇಕಾರ (29) ಹುತಾತ್ಮ ಸೈನಿಕ. ಈ ಸುದ್ದಿಯನ್ನು ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಮಂಜುನಾಥ ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಮಂಜುನಾಥ ಅವರ ಸಾವಿನ ಸುದ್ದಿ ಕೇಳಿ ಗ್ರಾಮದಲ್ಲಿ ನೀರವ ಮೌನ ಉಂಟಾಗಿದೆ.

ಮಂಜುನಾಥ ತಮ್ಮ 20ನೇ ವಯಸ್ಸಿನಲ್ಲಿಯೇ ಭಾರತೀಯ ಸೇನೆಗೆ ಸೇರಿದ್ದರು. ಒಂಬತ್ತು ವರ್ಷದಿಂದ ಸೇನೆಯಲ್ಲಿದ್ದ ಅವರು ಸದ್ಯ ಮದ್ರಾಸ್ ರೆಜಿಮೆಂಟ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದರು. 6 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಮಂಜುನಾಥ ಗಡಿ ಕಾಯಲು ಸೇನೆಗೆ ಮರಳಿದ್ದರು. ಆದರೆ ಉಗ್ರರ ಅಟ್ಟಹಾಸಕ್ಕೆ ಮಂಜುನಾಥ್ ಹುತಾತ್ಮರಾಗಿರುವ ಸುದ್ದಿ ತಿಳಿದು ಪತ್ನಿ, ಕುಟುಂಬಸ್ಥರು ಆಘಾತಕ್ಕೆ ಒಳಗಾಗಿದ್ದಾರೆ.

ಯೋಧ ಮಂಜುನಾಥ ಅವರ ಮೃತ ದೇಹವು ಬುಧವಾರ ಅಥವಾ ಗುರುವಾರ ಸ್ವಗ್ರಾಮಕ್ಕೆ ಬರುವ ಸಾಧ್ಯತೆ ಇದೆ ಎಂಬ ಮಾಹಿತಿ ಕುಟುಂಬದ ಮೂಲಗಳಿಂದ ಲಭ್ಯವಾಗಿದೆ. ವಿಷಯ ತಿಳಿಯುತ್ತಿದಂತೆ ಹುಬ್ಬಳ್ಳಿ ತಹಶೀಲ್ದಾರ್ ಸಂಗಪ್ಪ ಅವರು ಇನಾಂ ವೀರಾಪುರ ಗ್ರಾಮಕ್ಕೆ ಭೇಟಿ ನೀಡಿ, ಮಂಜುನಾಥ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *