ಉಗ್ರ ಸಂಘಟನೆಗೆ ಸೇರಿ: ಬಂಧಿತ ಪಾಕ್ ಉಗ್ರರಿಂದ ಕೈದಿಗಳಿಗೆ ಪ್ರಚೋದನೆ

– 7 ಪಾಕಿಸ್ತಾನಿ ಉಗ್ರರ ಸ್ಥಳಾಂತರಕ್ಕೆ ಸುಪ್ರೀಂಗೆ ಜಮ್ಮು-ಕಾಶ್ಮೀರ ಸರ್ಕಾರ ಮನವಿ

ನವದೆಹಲಿ: ಜಮ್ಮು ಜೈಲಿನಲ್ಲಿರುವ 7 ಜನ ಪಾಕಿಸ್ತಾನದ ಉಗ್ರರು, ಭಯೋತ್ಪಾದನೆಗೆ ಸೇರುವಂತೆ ಸ್ಥಳೀಯ ಕೈದಿಗಳಿಗೆ ಪ್ರಚೋದನೆ ನೀಡುತ್ತಿದ್ದಾರೆ. ಇದರಿಂದಾಗಿ ಬಂಧಿತ ಉಗ್ರ ಕೈದಿಗಳನ್ನು ಜಮ್ಮುನಿಂದ ತಿಹಾರ್ ಜೈಲಿಗೆ ವರ್ಗಾಯಿಸಲು ಅನುಮತಿ ನೀಡುವಂತೆ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದೆ.

ನ್ಯಾಯಾಧೀಶರಾದ ಎಲ್.ಎನ್.ರಾವ್ ಹಾಗೂ ಎಂ.ಆರ್ ಶಾ ಅವರ ಪೀಠವು, ಅರ್ಜಿಯ ವಿಚಾರವಾಗಿ ಕೇಂದ್ರ ಸರ್ಕಾರ ಹಾಗೂ ದೆಹಲಿ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.

ಬಂಧಿತ ಉಗ್ರರು ವಿವಿಧ ಭಯೋತ್ಪಾದಕ ಸಂಘಟನೆಗಳಿಗೆ ಸೇರಿದ್ದು, ಸ್ಥಳೀಯ ಕೈದಿಗಳಿಗೆ ತಮ್ಮ ಸಂಘಟನೆಗಳಿಗೆ ಸೇರುವಂತೆ ಪ್ರಚೋದಿಸುತ್ತಿದ್ದಾರೆ. ಹೀಗಾಗಿ ಅವರನ್ನು ತಿಹಾರ್ ಜೈಲಿಗೆ ವರ್ಗಾಯಿಸುವ ಅಗತ್ಯವಿದೆ ಎಂದು ಜಮ್ಮು-ಕಾಶ್ಮೀರ ಪರ ವಕೀಲ ಶೋಯಿಬ್ ಆಲಂ ಕೋರ್ಟ್ ನಲ್ಲಿ ಮನವಿ ಮಾಡಿದ್ದಾರೆ.

ತಿಹಾರ್ ಜೈಲಿಗೆ ವರ್ಗಾಯಿಸಲು ಸಾಧ್ಯವಾಗದೇ ಇದ್ದಲ್ಲಿ ಬಿಗಿ ಭದ್ರತೆಯ ಹೊಂದಿರುವ ಹರಿಯಾಣ ಅಥವಾ ಪಂಜಾಬ್‍ನ ಯಾವುದಾದರೂ ಜೈಲಿಗೆ ವರ್ಗಾಯಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಭಯೋತ್ಪಾದಕರಿಗೆ ನೀಡಿದ ನೋಟಿಸ್ ಪ್ರತಿಯನ್ನು ಸಲ್ಲಿಸುವಂತೆ ಕೋರ್ಟ್ ಸೂಚಿಸಿದೆ. ಜೊತೆಗೆ ಈ ವಿಚಾರವಾಗಿ ಮತ್ತಷ್ಟು ತನಿಖೆ ನಡೆಸುವುದಾಗಿ ತಿಳಿಸಿದೆ.

ಪುಲ್ವಾಮಾ ದಾಳಿಯ ಮರು ದಿನವೇ (ಫೆಬ್ರವರಿ 15ರಂದು) ಜಮ್ಮು ಜೈಲಿನಲ್ಲಿರುವ ಲಷ್ಕರೆ ತಯ್ಬಾ ಉಗ್ರ ಝಾಹಿದ್ ಫಾರೂಕ್‍ನನ್ನು ಬೇರೊಂದು ಜೈಲಿಗೆ ಸ್ಥಳಾಂತರಿಸುವಂತೆ ಜಮ್ಮು-ಕಾಶ್ಮೀರ ಸರ್ಕಾರ ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *